ಬೆಳಗಾವಿ: ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಲಕ್ಷಾಂತರ ಜನರು ಸೇರಿದಾಗ ಎಸೆದ ಕಸವು ರಾಶಿ ರಾಶಿ. ಸಾವಿರಾರು ಚಪ್ಪಲಿಗಳು ನೀರಿನ ಬಾಟಲಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಚಿಂದಿ ಆಯುವ 10 ಮಂದಿ ಐದೇ ತಾಸಿನಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಹಣ ಗಳಿಸಿದರು. ರಾಜ್ಯೋತ್ಸವ ಕಸದಲ್ಲಿಯೂ ಗಳಿಕೆ ಮಾಡಬಹುದು. ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ರಾಣಿ ಚನ್ನಮ್ಮ ವೃತ್ತದಲ್ಲಿ ಅಪಾರ ಸಂಖ್ಯೆಯ ಜನ ಸೇರಿದ್ದರು. ಅವರು ನೀರು ಕುಡಿದು ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳನ್ನು ಗುರುವಾರ 10 ಮಂದಿ ಚಿಂದಿ ಆಯುವವರು ಸಂಗ್ರಹಿಸಿದರು. ಬೆಳಗಿನ 3 ಗಂಟೆಯಿಂದ ರಿಂದ ಬೆಳಿಗ್ಗೆ 8ರವರೆಗೆ ಎರಡು ಟನ್‌ಗೂ ಅಧಿಕ ಬಾಟಲಿಗಳನ್ನು ಸಂಗ್ರಹಿಸಿದರು.

ಮಹಾನಗರ ಪಾಲಿಕೆಯು ಪ್ರತಿ ಕೆ.ಜಿ.ಗೆ 10 ರೂ.ದರ ನೀಡುತ್ತದೆ. 2,000 ಕೆ.ಜಿ ಬಾಟಲಿಗಳನ್ನು ನೀಡಿ 20 ಸಾವಿರ ರೂ.ಗಳನ್ನು ಗಳಿಸಿದರು. ಎಲ್ಲ ಹತ್ತೂ ಮಂದಿಗೆ ತಲಾ 32,000 ಹಂಚಿದ್ದಾಗಿ ಪಾಲಿಕೆ ಪರಿಸರ ಎಂಜಿನಿಯರ್ ಹಣಮಂತ ಕಲಾದಗಿ ಅವರು ತಿಳಿಸಿದ್ದಾರೆ

475 ಜನರಿಗೆ ಮಹಾನಗರ ಪಾಲಿಕೆಯು  ಚಿಂದಿ ಆಯುವ ಗುರುತಿನ ಚೀಟಿ ನೀಡಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಪ್ರತಿದಿನ ಗರಿಷ್ಠ 200 ರೂ. ಗಳಿಸುತ್ತಾರೆ. ಆದರೆ, ರಾಜ್ಯೋತ್ಸವಕ್ಕೆ ಬಂದ ಜನ ಬಿಸಾಡಿದ ತ್ಯಾಜ್ಯ ಅಧಿಕ ಪ್ರಮಾಣದಲ್ಲಿತ್ತು. ವೃತ್ತದಲ್ಲಿ ನಿಯೋಜನೆ ಮಾಡಿದ ಹತ್ತೂ ಜನರಿಗೆ ನಾಡ ಹಬ್ಬದ ಕಾಣಿಗೆ ಸಿಕ್ಕಂತಾಗಿದೆ ಎಂದು ತಿಳಿಸಿದರು.

ಉಳಿದಂತೆ, 200 ಕೆ.ಜಿ ವಿವಿಧ ಬಗೆಯ ಹೂವು, 100 ಕೆ.ಜಿ.ಗೂ ಅಧಿಕ ಹರಿದ ಚಪ್ಪಲಿಗಳು, ಪ್ಲಾಸ್ಟಿಕ್ ಚೀಲಗಳು, ತಿಂಡಿ ತಿಂದು ಬಿಸಾಡಿದ ವ್ಯರ್ಥ ಪದಾರ್ಥಗಳು ಹೀಗೆ ಅಪಾರ ಪ್ರಮಾಣದ ತ್ಯಾಜ್ಯವನ್ನು ಪಾಲಿಕೆ ವಾಹನಗಳಲ್ಲಿ ಸಾಗಿಸಲಾಯಿತು. ಸಂಜೆಗೆ ವಾಹನಗಳಲ್ಲಿ ಸಾಗಿಸಲಾಯಿತು. ಸಂಜೆಗೆ ಸ್ಕ್ಯಾಪ್ ವ್ಯಾಪಾರಿಗಳಿಗೆ ಮಾರಾಟ ಮಾಡಲಾಯಿತು.

ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರ ನಿರ್ದೇಶನದಂತೆ, ರಾಜ್ಯೋತ್ಸವ ಮೆರವಣಿಗೆ ನಡೆದ ಮಾರ್ಗಗಳಲ್ಲಿ 100 ಕೆ.ಜಿ.ಯಷ್ಟು ತ್ಯಾಜ್ಯ ಪದಾರ್ಥಗಳನ್ನು ಸಂಗ್ರಹಿಸುವ ದೊಡ್ಡ ತೊಟ್ಟಿಗಳನ್ನು ಇಡಲಾಗಿತ್ತು. ಇದರಿಂದ ಮಾಲಿನ್ಯವಾಗದಂತೆ, ತ್ಯಾಜ್ಯದಿಂದ ನಗರದ ಸೌಂದರ್ಯ ಹಾಳಾಗದಂತೆ ಕಾಪಾಡಲಾಯಿತು ಎಂದು ತಿಳಿಸಿದ್ದಾರೆ.