ಬೆಳಗಾವಿ, :ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಮಳೆ ಆಗುತ್ತಿದ್ದು, ಕಂದಾಯ, ಪೊಲೀಸ್, ಸಿಇಓ ಸೇರಿ ಎಲ್ಲರೂ ಸಭೆ ಮಾಡಿದ್ದೇವೆ. ಮಳೆಯಿಂದ ಯಾವುದೇ ತೊಂದರೆ ಸದ್ಯ ಇಲ್ಲ.
ಕೃಷ್ಣಾ ನದಿಗೆ 65 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಇದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟಪ್ರಭಾ ಜಲಾಶಯವು 51 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಸದ್ಯಕ್ಕೆ 32 ಟಿಎಂಸಿ ನೀರು ಸಂಗ್ರವಾಗಿದೆ. ಆದ್ದರಿಂದ ಯಾವುದೇ ತೊಂದರೆ ಇಲ್ಲ ಎಂದರು.
ಖಾನಾಪುರ ತಾಲೂಕಿನಲ್ಲಿ ವಾಡಿಕೆಗಿಂತ ಶೇ.37ರಷ್ಟು ಅಧಿಕ ಮಳೆ ಆಗಿದ್ದು, ತಾಲೂಕಿನಲ್ಲಿ 13 ಬ್ರಿಡ್ಜ್ ಗಳು ಮುಳುಗಿವೆ. ನಿನ್ನೆ ಕಂದಾಯ, ಲೋಕೋಪಯೋಗಿ ಸಚಿವರು ಮಾತನಾಡಿದ್ದಾರೆ. ಅವರ ನಿರ್ದೇಶನದಂತೆ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಚೋರ್ಲಾ ಘಾಟ್ ಹತ್ತಿರ ಕುಸುಮಳ್ಳಿ ಒಂದು ಬ್ರಿಡ್ಜ್ ಅಪಕಾರಿಯಾಗಿದೆ‌. ನಿನ್ನೆಯಿಂದ ಸಂಚಾರ ಮಾಡಬಾರದು ಎಂದು ಆದೇಶಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಭಾರೀ ಗಾತ್ರದ ವಾಹನಗಳನ್ನು ನಿಷೇಧ ಹೇರಲಾಗಿದೆ. ಸಣ್ಣ, ನಾಲ್ಕು ಟನ್ ಒಳಗಿನ ವಾಹನಗಳು ಓಡಾಡಬಹುದು. ಖಾನಾಪುರ ಮೂಲಕ ಪರ್ಯಾಯ ರಸ್ತೆ ಬಳಲಸಲು ಸೂಚಿಸಲಾಗಿದೆ ಎಂದರು.
ಬಿದ್ದ ಮನೆಗಳಿಗೆ ಎನ್ ಡಿ ಆರ್ ಎಫ್ ನಿಯಮಾವಳಿಯಂತೆ ಪರಿಹಾರ ನೀಡಲಾಗುವದು.
ಜಿಲ್ಲೆಯಲ್ಲಿ 421 ಕಾಳಜಿ ಕೇಂದ್ರ ಮಾಡಲು ಸಿದ್ಧತೆ ಮಾಡಲಾಗಿದೆ. ಹಿಂದಿನ ಪ್ರವಾಹದ ಅನುಭವ ಇದೆ. ಎಲ್ಲ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾವುದು ಎಂದ ಅವರು, ಬಳ್ಳಾರಿ ನಾಲಾ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ಮಾಹಿತಿ ಪಡೆಯುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.