ಬೆಳಗಾವಿ,:ಬದುಕಿನ ಆರೋಗ್ಯ ಮತ್ತು ಸೌಂದರ್ಯವನ್ನು ಸಮೀಕರಿಸುವ ಶಕ್ತಿ ವೈದ್ಯ ಬರಹಗಾರರಲ್ಲಿ ಇರಬೇಕು.  ಕನ್ನಡದಲ್ಲಿ ಆರೋಗ್ಯ ಸಾಹಿತ್ಯವನ್ನು ಗುರುತು ಅಧಿಕೃತ ವಾದಂತಹ ಗ್ರಂಥಗಳ ಕೊರತೆ ಇದೆ. ವೈದ್ಯರೇ ಆರೋಗ್ಯ ಸಾಹಿತ್ಯ ಗ್ರಂಥಗಳನ್ನು ರಚಿಸುವಂತೆ ಆಗಬೇಕು. ಆರೋಗ್ಯ ಸಾಹಿತ್ಯದ ಕುರಿತು ಸರ್ಕಾರಿ ವಲಯದಲ್ಲಿ ಯಾವುದೇ ಕೆಲಸ ಕಾರ್ಯಗಳು ಜರುಗುತ್ತಿಲ್ಲ. ಪರಸ್ಪರ ಸಂವಹನವಿಲ್ಲ ಎಂದು ಸಮ್ಮೇಳನಾಧ್ಯಕ್ಷರಾದ ಖ್ಯಾತ ವೈದ್ಯ ಬರಹಗಾರ ಡಾ.ನಾ. ಸೋಮೇಶ್ವರ ಅವರಿಂದಿಲ್ಲಿ ಹೇಳಿದರು.
ಭಾರತೀಯ ವೈದ್ಯಕೀಯ ಸಂಘ, ಕನ್ನಡ ವೈದ್ಯ ಬರಹಗಾರರ ಸಮಿತಿ, ಕೆಎಲ್‌ಇ ವಿಶ್ವವಿದ್ಯಾಲಯದ ಜೆಎನ್‌ಎಂಸಿ ಕನ್ನಡ ಬಳಗ ಇವುಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ವೈದ್ಯ ಬರಹಗಾರರ ಐದನೇ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತಾನಾಡಿ ಅವರು, ಒಂದೇ ವಿಷಯದ ಬಗ್ಗೆ ಹಲವು ಸಲ ಗ್ರಂಥಗಳು ಪ್ರಕಟವಾಗಿರುವುದನ್ನು ಗಮನಿಸಬಹುದು. ಆರೋಗ್ಯ ಸಾಹಿತ್ಯ ಕುರಿತು ಆದ್ಯತೆ ಕಡಿಮೆಯಾಗಿದೆ. ಆದ್ದರಿಂದ ರಾಜ್ಯದ ಪ್ರತಿಯೊಂದು ವೈದ್ಯಕೀಯ ಕಾಲೇಜುಗಳಲ್ಲಿ ಕನ್ನಡ ಸಂಘ ಹಾಗೂ ಪ್ರಸಾರಾಂಗವಿರಬೇಕು. ಪ್ರಾಸಾರಂಗದ ಮೂಲಕ ಪ್ರಸ್ತುತ ಆರೋಗ್ಯ ವಿಚಾರಗಳ ಗ್ರಂಥಗಳನ್ನು ಪ್ರಕಟಿಸುತ್ತಿರಬೇಕು. ವರ್ತಮಾನದ ವೈದ್ಯಕೀಯ ಸಂಶೋಧನೆಗಳನ್ನು ಕೂಡ ದಾಖಲಿಸುವ ಕೆಲಸವಾಗಬೇಕು ಎಂದರು.
ಈಗಾಗಲೇ ಮಧ್ಯಪ್ರದೇಶ ಮತ್ತು ಉತ್ತರಪ್ರದೇಶಗಳಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಮಾತೃಭಾಷೆಯಲ್ಲಿ ಬೋಧಿಸುವ ಕಾರ್ಯ ನಡೆದಿದೆ. ತಮಿಳುನಾಡಿನಲ್ಲಿ ಮುಂಬರುವ ವರ್ಷದಿಂದ ತಮಿಳಿನಲ್ಲಿ ಬೋಧಿಸುವ ಕರ‍್ಯವಾಗಬಹುದು. ಕರ್ನಾಟಕದಲ್ಲಿ ಕೂಡ ವೈದ್ಯಕೀಯ ಶಿಕ್ಷಣ ಪಠ್ಯಪುಸ್ತಕಗಳು ಕನ್ನಡದಲ್ಲಿ ದೊರೆಯುವಂತಾಗಬೇಕು. ಶಾಲಾ ಪಠ್ಯಕ್ರಮದಲ್ಲಿ ಆರೋಗ್ಯದ ಕುರಿತು  ಮಾಹಿತಿ ಅಳವಡಿಸಬೇಕು. ಅದರಂತೆ ಆರೋಗ್ಯ ಪತ್ರಿಕೋದ್ಯಮವೂ ಬೇಕು. ಕನ್ನಡದಲ್ಲಿ ಆರೋಗ್ಯ ಸಾಹಿತ್ಯ ಸಂವಹನದ ಸ್ನಾತಕೋತ್ತರ ಡಿಪ್ಲೋಮವನ್ನು ಪ್ರಾರಂಭಿಸಬೇಕು. ಸಾಹಿತ್ಯ ಸಮ್ಮೇಳನಗಳಲ್ಲಿ ಆರೋಗ್ಯ ಸಾಹಿತ್ಯ ವಿಮರ್ಶೆಯಾಗಬೇಕು. ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸಮ್ಮೇಳನಗಳಲ್ಲಿ ಆರೋಗ್ಯ ಗೋಷ್ಠಿಗಳನ್ನು ಆಯೋಜಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ನೋಂದಾಯಿತ ವೈದ್ಯರು ೧,೪೧,೧೫೪, ಆದರೆ ಕನ್ನಡದಲ್ಲಿ ಬರೆಯಬಲ್ಲ ವೈದ್ಯರು ಕೇವಲ ೧೨೦, ನಿಯಮಿತವಾಗಿ ಬರೆಯುವವರು ಬರೀ ೫೦, ಗಂಭೀರವಾಗಿ ತೆಗೆದುಕೊಂಡವರು ೨೦. ಉಳಿದವರು ಏಕೆ ಬರೆಯುತ್ತಿಲ್ಲ? ಕನ್ನಡ ಬರುವುದಿಲ್ಲವೆ? ಆಸಕ್ತಿಯಿಲ್ಲವೆ ಸಮಯವಿಲ್ಲವೆ? ರಾಜೀವ್ ಗಾಂಧಿ ಆರೋಗ್ಯ ವಿವಿ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ವಿರಳವಾದ ಕಾರ್ಯಾಗಾರಗಳನ್ನು ನಡೆಸಿತ್ತು. ಸೂಕ್ತ ಆರೋಗ್ಯ ನಿಘಂಟು ಬೇಕಾಗಿದೆ. ಆರೋಗ್ಯ ಪುಸ್ತಕವನ್ನು ಬರೆಯುವುದು ಹೇಗೆ’ ಎನ್ನುವ ಬಗ್ಗೆಯೇ ಒಂದು ಪುಸ್ತಕ ಬರಬೇಕಾಗಿದೆ. ನಮ್ಮಲ್ಲಿ ನಿರಂತರ ವೈದ್ಯಕೀಯ ಶಿಕ್ಷಣ ಕರ‍್ಯಾಗಾರದಂತೆ ಜನಪ್ರಿಯ ಆರೋಗ್ಯ ಸಾಹಿತ್ಯದಲ್ಲಿ ವರ್ತಮಾನ ಸಂಶೋಧನೆಗಳ ಆಯ್ದ ಭಾಗಗಳ ಸಾರಾಂಶವು ಸಾರ್ವಜನಿಕರಿಗೆ ದೊರೆಯಬೇಕು. ಭಾರತೀಯ ವೈದ್ಯಕೀಯ ಸಂಘ, ಕನ್ನಡ ವೈದ್ಯ ಬರಹಗಾರರ ಸಮಿತಿಯು, ಪ್ರಸಾರಾಂಗದ ಜೊತೆಗೂಡಿ ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷರಾದ ಡಾ.ಶ್ರೀಧರ ಕೆ.ಆರ್ ಈ ಸಂದರ್ಭದಲ್ಲಿ ಮಾತನಾಡಿದರು. ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ್ ಎಸ್. ಅಧ್ಯಕ್ಷೀಯ ನುಡಿಗಳನ್ನಾಡಿದರು.
೯ ಗ್ರಂಥಗಳ ಲೋಕಾರ್ಪಣೆ: ‘ವೈದ್ಯಸಂಗಮ’ ಸ್ಮರಣಸಂಚಿಕೆಯನ್ನು ಹಾಗೂ ೯ ವೈದ್ಯಕೀಯ ಗ್ರಂಥಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ೨೦೨೩-೨೪ನೇ ಸಾಲಿನ ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿಯನ್ನು ಡಾ.ಸುರೇಶ ಸಗರದ, ಡಾ.ಸುನಂದಾ ಆರ್.ಕುಲಕರ್ಣಿಯವರಿಗೆ, ಹಸ್ತಪ್ರತಿ ಪ್ರಶಸ್ತಿಯನ್ನು ಡಾವೀಣಾ ಎಸ್.ಭಟ್, ಡಾ.ದಿವ್ಯಾ ಕೆ.ಎನ್. ಡಾ.ರಣಜಿತ ಬೀರಣ್ಣ ನಾಯ್ಕ ಕೆಂಚನ್, ಡಾ.ಸಲೀಮ್ ನದಾಫ್ ಇವರಿಗೆ ಪ್ರದಾನ ಮಾಡಲಾಯಿತು.