ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ಜನಿಸಿದ ಮಹಾಶರಣ ಅಲ್ಲಮಪ್ರಭುದೇವರ ಹೆಸರನ್ನು ಶಿವಮೊಗ್ಗ ನಗರದ ಹಳೇ ಕಾರಾಗೃಹದ ಮೈದಾನಕ್ಕೆ ಇಡುವುದು ಸೂಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು ನಮಗೆ ಅಪಾರ ಸಂತೋಷ ಉಂಟು ಮಾಡಿದೆ ಎಂದು ಶಿವಮೊಗ್ಗದ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳವರು ಪ್ರತಿಕ್ರಿಯಿಸಿದ್ದಾರೆ.

2019ರ ಜನವರಿಯಲ್ಲಿ ಶಿವರಾತ್ರೀಶ್ವರರ 1059ನೆಯ ಜಯಂತಿ ಮಹೋತ್ಸವವನ್ನು ಆಚರಿಸುವಾಗ ಈ ಜಾಗಕ್ಕೆ ಅಲ್ಲಮಪ್ರಭು ಬಯಲು ಎಂದೇ ನಾಮಕರಣ ಮಾಡಿದ್ದು, ಅದನ್ನು ಹಾಗೆಯೇ ಕರೆಯಬೇಕೆಂದು ಶರಣ ಬಿ. ಎಸ್. ಯಡಿಯೂರಪ್ಪನವರ ಅಧ್ಯಕ್ಷತೆಯ ಬಹಿರಂಗ ಸಮಾರಂಭದಲ್ಲಿ ಸುತ್ತೂರು ಜಗದ್ಗುರುಗಳವರು ಸೂಚಿಸಿದ್ದರು. ಅಂದು ಎಲ್ಲ ಜನಸಮುದಾಯದ ಒಪ್ಪಿಗೆಯಿಂದ ಘೋಷಿಸಿದ್ದ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಅಧಿಕೃತವಾಗಿ ಘೋಷಿಸಿರುವುದು, 12ನೆಯ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರಿಂದ ಸ್ಥಾಪಿಸಲ್ಪಟ್ಟ ಜಗತ್ತಿನ ಪ್ರಜಾಪ್ರಭುತ್ವದ ತಂದೆಯೆಂದೇ ಖ್ಯಾತಿವೆತ್ತ ಅನುಭವ ಮಂಟಪಕ್ಕೆ ಸಂದ ಗೌರವವೆಂದು ಭಾವಿಸಿಕೊಂಡಿದ್ದೇವೆ.

ಕನ್ನಡದ ಪ್ರಥಮ ಅನುಭಾವಿ ಕವಿ, ಬಯಲು ತತ್ತ್ವದ ಪ್ರತಿಪಾದನೆ ಮಾಡಿದ ದಾರ್ಶನಿಕ, ಶೂನ್ಯಪೀಠದ ಪ್ರಥಮ ಅಧ್ಯಕ್ಷ, ಪ್ರಜಾಪ್ರಭುತ್ವದ ಮೊದಲ ಮಾದರಿ ಅನುಭವ ಮಂಟಪದ ಪ್ರಥಮ ಅಧ್ಯಕ್ಷ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಯಲ್ಲಿ ಜನಿಸಿದ ಮಹಾಶರಣ ಅಲ್ಲಮಪ್ರಭುದೇವರ ಹೆಸರನ್ನು ಶಿವಮೊಗ್ಗ ನಗರದ ಹಳೇ ಕಾರಾಗೃಹದ ಮೈದಾನಕ್ಕೆ ಇಡುವುದು ಸೂಕ್ತ ಎಂದು ಘೋಷಿಸಿದ ನಾಡಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಹಾಗೂ ಈ ವಿಷಯದ ಕುರಿತಾಗಿ ದನಿ ಎತ್ತಿ ಮುಖ್ಯಮಂತ್ರಿಗಳ ಗಮನಸೆಳೆದ ಸಚಿವ ಮಧು ಬಂಗಾರಪ್ಪ ಅವರಿಗೆ ಜಿಲ್ಲೆಯ ಎಲ್ಲಾ ಮಠಾಧೀಶರ ಪರವಾಗಿ ಹಾಗೂ ಸಮಾಜ ಬಾಂಧವರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ.