ಬೆಳಗಾವಿ, ಸೆ.29:ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಹುದಲಿಯ ಬೆಳಗಾಂ ಶುಗರ್ಸ್ ಪ್ರೈ.ಲಿಮಿಟಡ್ ಮೋಡ ಬಿತ್ತನೆಗೆ ಮುಂದಾಗಿದ್ದು, ಮೋಡ ಬಿತ್ತನೆ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ(ಸೆ.29) ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದರು.
ಮೋಡ ಬಿತ್ತನೆ ಕಾರ್ಯಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮಹಾನಿರ್ದೇಶಕರ(ಡಿಜಿಸಿಎ) ಕಚೇರಿಯು ಗ್ರೀನ್ ಸಿಗ್ನಲ್ ನೀಡಿದೆ.
ಸೆ.29 ಹಾಗೂ 30 ರಂದು ಎರಡು ದಿನಗಳ ಕಾಲ ಬೆಳಗಾವಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದ್ದು, ಕ್ಯಾಪ್ಟನ್ ವೀರೇಂದ್ರ ಸಿಂಗ್ ಹಾಗೂ ಕ್ಯಾಪ್ಟನ್ ಆದರ್ಶ ಪಾಂಡೆ ನೇತೃತ್ವದಲ್ಲಿ ವಿಟಿ-ಕೆಸಿಎಂ ವಿಮಾನವು ಮೋಡ ಬಿತ್ತನೆ ಮಾಡಲಿದೆ.
ಕಡಿಮೆ ಎತ್ತರದಲ್ಲಿರುವ ಮೋಡಗಳ ಆಕರ್ಷಣೆಗೆ ಸಿಎಸಿಎಲ್-2 ಅಯೋಡೈಡ್ ಹಾಗೂ 20 ಸಾವಿರ ಅಡಿ ಮೇಲೆ ಎತ್ತದರದಲ್ಲಿರುವ ಮೋಡಗಳ ಆಕರ್ಷಣೆಗೆ ಸಿಲ್ವರ್ ಐಯೋಡೈಡ್ ರಾಸಾಯನಿಕ ಸಿಂಪಡಿಸಲಾಗುತ್ತದೆ.
ಒಂದು ವೇಳೆ ನಿರ್ದಿಷ್ಟ ಪ್ರದೇಶದ ವ್ಯಾಪ್ತಿಯಲ್ಲಿ ಮೋಡಗಳು ಇದ್ದರೆ ರಾಸಾಯನಿಕ ಸಿಂಪಡಣೆ ಮಾಡಿದ ಐದು ನಿಮಿಷಗಳಲ್ಲಿ ಮಳೆ ಬರಬಹುದು. ಮೋಡಗಳು ಇರದಿದ್ದಲ್ಲಿ ಹಾಗೇ ಹಿಂದಿರುಗಿಸಲಾಗುವದು ಬೆಳಗಾವಿಯಲ್ಲಿ ಮೋಡಗಳು ಕಂಡು ಬಂದಿರುವದರಿಂದ ಮೋಡ ಬಿತ್ತನೆಗೆ ಪೂರಕ ವಾತಾವರಣವಿದೆ ಎಂದು ವಿಮಾನದ ತಾಂತ್ರಿಕ ಸಿಬ್ಬಂದಿ ತಿಳಿಸಿದರು.
5 ರಿಂದ10 ಸಾವಿರ ಅಡಿಗಳ ಮೇಲೆ ಮೋಡಗಳನ್ನು ಆಕರ್ಷಿಸಲು ಸಿಲ್ವರ್ ಐಯೋಡೈಡ್ ರಾಸಾಯನಿಕವನ್ನು ಆಗಸದಲ್ಲಿ ಸಿಂಪಡಣೆ ಮಾಡಲಾಗುತ್ತದೆ ಎಂದು ಸಂಸ್ಥೆಯ ಅಧಿಕಾರಿಗಳು ವಿವರಿಸಿದರು.
ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಶಾಸಕ ಆಸಿಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ರಾಹುಲ್ ಜಾರಕಿಹೊಳಿ ಮತ್ತಿತರರು ಉಪಸ್ಥಿತರಿದ್ದರು