ಬೆಳಗಾವಿ:ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಜೋಡಣೆ ಮಾಡಿದರೆ ಸಾಕು ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದ್ದು, ಈ ಕುರಿತು ಉಂಟಾಗಿರುವ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದೆ.

ಗೃಹ ವಿದ್ಯುತ್ ಬಳಕೆದಾರರು ಬಾಡಿಗೆದಾರರಾಗಿದ್ದಲ್ಲಿ ವಾಸದ ಮನೆಯ ವಿಳಾಸಕ್ಕೆ ಸಂಬಂಧಿಸಿದಂತೆ ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಜೋಡಣೆ ಮಾಡಿ ನೋಂದಾಯಿಸುವ ಮೂಲಕ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಗೃಹ ಜ್ಯೋತಿ ಯೋಜನೆಯನ್ನು ಕೆಲವು ಷರತ್ತುಗಳೊಂದಿಗೆ ಜುಲೈ 1ರಿಂದ ಜಾರಿಗೊಳಿಸಲು ಅನುಮೋದನೆ ನೀಡಲಾಗಿದೆ. ಈ ಯೋಜನೆಯ ನೋಂದಣಿ ಇದೇ 18ರಿಂದ ಆರಂಭವಾಗಲಿದೆ.

ಈ ಯೋಜನೆಯ ಲಾಭ ಪಡೆಯಲು ಇಚ್ಚಿಸುವ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್‌ನಲ್ಲಿ ವಿಶೇಷವಾಗಿ ರೂಪಿಸಿರುವ https://sevasindhugs.karnataka.gov.in/gruhajyothi ವಿಳಾಸದಲ್ಲಿ ಲಾಗಿನ್ ಆಗಿ ನೋಂದಾಯಿಸಬೇಕು ಎಂದು ತಿಳಿಸಲಾಗಿದೆ.