ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ಅನರ್ಹ ವಿಚಾರಕ್ಕೆ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟೆನ್ನವರ ಅವರ ವಿರುದ್ಧ ದಕ್ಷಿಣ ಶಾಸಕ ಅಭಯ ಪಾಟೀಲ ಕಿಡಿಕಾರಿದ್ದು, ರಾಜ್ಯಪಾಲರಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ.
ಬೆಳಗಾವಿ ತಿನಿಸು ಕಟ್ಟೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ 37 ಜನ ನಗರಸೇವಕರು ನನಗೆ ಆಪ್ತರೇ. ಆದರೆ, ಪ್ರಾದೇಶಿಕ ಆಯುಕ್ತರು ರಾಜಕೀಯ ಒತ್ತಡಕ್ಕಾಗಿ ನಗರಸೇವಕರಾದ ಮಂಗೇಶ ಪವಾರ ಮತ್ತು ಜಯಂತ ಜಾಧವ ಅವರ ವಿರುದ್ಧ ರಾಜಕೀಯ ಒತ್ತಡಕ್ಕಾಗಿ ನಿರ್ಣಯ ಕೈಗೊಂಡಿದ್ದಾರೆ ಎಂದು ಆರೋಪಿಸಿದರು.
ಪ್ರಾದೇಶಿಕ ಆಯುಕ್ತರ ವಿರುದ್ದ ರಾಜ್ಯಪಾಲರಿಗೆ ದೂರು ಕೊಡುತ್ತಿದ್ದೇವೆ. ನಗರಸೇವಕರ ಸದಸ್ಯತ್ವ ರದ್ದು ಮಾಡಿರುವ ಆದೇಶ ಪ್ರತಿಯೊಂದಿಗೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಐಎಎಸ್ ಕಚೇರಿಗೂ ದೂರು ಕೊಡುತ್ತೇವೆ. ಪ್ರಾದೇಶಿಕ ಆಯುಕ್ತರ ಅವಧಿಯಲ್ಲಿ ಕಾನೂನು ಬಾಹಿರ ಕೆಲಸಗಳ ಕುರಿತೂ ತನಿಖೆಗೆ ಆಗ್ರಹಿಸುತ್ತೇವೆ ಎಂದು ಅಭಯ್ ಪಾಟೀಲ ಸ್ಪಷ್ಟಪಡಿಸಿದರು.
ಪಾಲಿಕೆ ಸದಸ್ಯರಾಗುವ ಮೊದಲೇ ತಿನಿಸು ಕಟ್ಟೆ ನಿರ್ಮಾಣವಾಗಿ ಮಳಿಗೆಗಳು ಅವರಿಗೆ ಹಂಚಿಕೆ ಆಗಿದೆ.
ಇದು ಮಹಾನಗರ ಪಾಲಿಕೆಯಲ್ಲಿ ಆಸ್ತಿ ಅಲ್ಲ. ಅದು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದೆ. ಮಳಿಗೆ ಪಡೆದ ಎರಡು ವರ್ಷಗಳ ನಂತರ ಪಾಲಿಕೆ ಸದಸ್ಯರಾಗಿ ಅವರು ಆಯ್ಕೆಯಾಗಿದ್ದಾರೆ. ನಗರಸೇವಕರ ಸದಸ್ಯತ್ವ ರದ್ದು ಮಾಡಲು ಈ ಕಾಯ್ದೆಯಲ್ಲಿ ಅವಕಾಶ ಇರುವುದಿಲ್ಲ. ಪ್ರಾದೇಶಿಕ ಆಯುಕ್ತರು ರಾಜಕೀಯ ಪ್ರೇರಿತವಾಗಿ ಕೆಲಸ ಮಾಡಿದ್ದಾರೆ. ಇಬ್ಬರು ಸದಸ್ಯರ ಪರವಾಗಿ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಅಭಯ್ ಪಾಟೀಲ ಸ್ಪಷ್ಟಪಡಿಸಿದರು.