ಬೆಳಗಾವಿ : ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಸಾಂವಿಧಾನಿಕ ಪದ ಬಳಕೆ ಆರೋಪ ಪ್ರಕರಣದಲ್ಲಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ನ್ಯಾಯಾಲಯ ಇಂದು ಮಹತ್ವದ ಆದೇಶ ಪ್ರಕಟಿಸಿದೆ. ಅವರನ್ನು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಬೆಳಗಾವಿಯ ಐದನೇ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸ್ಪರ್ಶ ಡಿಸೋಜ ಅವರು ಆದೇಶಿಸಿದ್ದಾರೆ. ಅದರಂತೆ ಸಿ.ಟಿ.ರವಿ ಅವರನ್ನು ಟ್ರಾಜೆಂಟ್ ವಾರೆಂಟ್ ಆದೇಶದಂತೆ ಪೊಲೀಸರು ಬೆಂಗಳೂರಿಗೆ ಕರೆದೊಯ್ಯಲಿದ್ದಾರೆ., ಹಿರೇಬಾಗೇವಾಡಿ ಪೊಲೀಸರು ಇಂದು ಬೆಳಗ್ಗೆ ಬೆಳಗಾವಿ ನ್ಯಾಯಾಲಯಕ್ಕೆ ರವಿ ಅವರನ್ನು ಹಾಜರುಪಡಿಸಿದ್ದರು. ಆ ಸಂದರ್ಭದಲ್ಲಿ ವಕೀಲರು ಜಾಮೀನು ನೀಡುವಂತೆ ಮನವಿ ಮಾಡಿದ್ದರು. ವಾದ- ಪ್ರತಿವಾದ ಆಲಿಸಿರುವ ನ್ಯಾಯಾಲಯ ಆದೇಶ ಕಾಯ್ದಿರಿಸಿತ್ತು. ಆದರೆ ತನಿಖಾಧಿಕಾರಿಗಳು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಕರೆದೊಯ್ಯಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಅದರಂತೆ ಬೆಳಗಾವಿ ನ್ಯಾಯಾಲಯ ಬೆಂಗಳೂರಿಗೆ ಕರೆದೊಯ್ಯಲು ಎಷ್ಟು ಸಮಯ ಬೇಕು ಎಂದು ಕೇಳಿದೆ. ಇದಕ್ಕೆ ಪೊಲೀಸರು ವಿಮಾನದ ಮೂಲಕ ಹೋಗುವುದಾದರೆ ಎರಡು ಗಂಟೆ, ರಸ್ತೆ ಮೂಲಕ ಹೋಗುವುದಾದರೆ 12 ಗಂಟೆ ಬೇಕು ಎಂದು ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
ನಿದ್ದೆಗೆಟ್ಟು ಸುತ್ತಾಟ :
ಸಿ.ಟಿ. ರವಿ ಅವರನ್ನು ಖಾನಾಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದ ಪೊಲೀಸರು ತಡರಾತ್ರಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಾರೆ ಎಂಬ ವದಂತಿ ಹಬ್ಬಿತು. ಆದರೆ ಅವರು ಬೆಳಗಾವಿಯಿಂದ ಬೆಳಗಾವಿ ಜಿಲ್ಲೆಯಿಂದ ಬಾಗಲಕೋಟೆ ಜಿಲ್ಲೆಗಳಿಗೆ ಸಿ.ಟಿ. ರವಿ ಅವರನ್ನು ಕರೆದುಕೊಂಡು ಹೋಗಿ ಮರಳಿ ಬೆಳಗಾವಿಗೆ ಕರೆತಂದರು. ರಾತ್ರಿಯಿಡೀ ಜನನಾಯಕ ರವಿ ಅವರನ್ನು ಸುತ್ತಾಡಿಸಿರುವುದು ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಿನ ಜಾವ ನಡು ರಸ್ತೆಯಲ್ಲಿ ನಿದ್ದೆಗೆಟ್ಟು ಕುಳಿತ ರವಿ ಅವರು ಪ್ರತಿಭಟನೆ ನಡೆಸಿದರು. ಗುರುವಾರ ರಾತ್ರಿ 12 ಗಂಟೆ ಸುಮಾರಿಗೆ ಖಾನಾಪುರ ಪೊಲೀಸ್ ಠಾಣೆಯಿಂದ ಜೀಪಿನಲ್ಲಿ ಕರೆದುಕೊಂಡು ಹೋದ ಪೊಲೀಸರು ಕಿತ್ತೂರು, ಸವದತ್ತಿ, ರಾಮದುರ್ಗ, ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪೊಲೀಸ್ ಠಾಣೆವರೆಗೂ ಸುತ್ತಾಡಿಸಿದರು. ಮಧ್ಯರಾತ್ರಿ ಮೂರು ಗಂಟೆ ಸುಮಾರಿಗೆ ರವಿ ಅವರ ತಲೆಗೆ ಬ್ಯಾಂಡೇಜ್ ಹಾಕಿ ಪ್ರಥಮ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಇದಕ್ಕೂ ಮೊದಲು ಕಿತ್ತೂರಿನಲ್ಲಿ ಮಧ್ಯರಾತ್ರಿ 1:45ರ ಸುಮಾರಿಗೆ ಅರ್ಧ ಗಂಟೆಗಳ ಕಾಲ ಪೊಲೀಸ್ ವಾಹನ ನಿಂತೆ ಇತ್ತು. ರಾಮದುರ್ಗದಲ್ಲೂ ಕೆಲ ಹೊತ್ತು ವಾಹನ ನಿಲ್ಲಿಸಲಾಗಿದ್ದು 3:00 ವರೆಗೆ ಸುತ್ತಾಡಿಸಿ ರಾಮದುರ್ಗಕ್ಕೆ ಕರೆತಂದು ತಲೆಗೆ ಬ್ಯಾಂಡೇಜ್ ಹಚ್ಚಲಾಗಿದೆ. ಬೆಳಗಿನ ಜಾವ ಐದು ಗಂಟೆ ಬಳಿಕ ಗೌಪ್ಯ ಸ್ಥಳಕ್ಕೆ ಅವರನ್ನು ಕರೆದುಕೊಂಡು ಹೋಗಲಾಗಿದೆ. ಸುತ್ತಾಟದಿಂದ ಬಳಲಿದ ಸಿ.ಟಿ. ರವಿ ಅವರು ಪೊಲೀಸ್ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಸುತ್ತಾಡಿಸಿದರು ಎಂದು ಸಂದೇಹ ವ್ಯಕ್ತಪಡಿಸಿದರು.
ಪೊಲೀಸರಿಗೆ ಮೇಲಿಂದ ಮೇಲೆ ಯಾರಿಂದ ನಿರ್ದೇಶನ ಬರುತ್ತಿವೆ ? ಯಾರು ನಿರ್ದೇಶಿಸುತ್ತಿದ್ದಾರೆ ಎಂದು ಗೊತ್ತಿಲ್ಲ ಎಂದು ಅವರು ಪೊಲೀಸರ ವರ್ತನೆಗೆ ಕಿಡಿ ಕಾರಿದರು.
ಕೆಲ ಸಂದರ್ಭದಲ್ಲಿ ಪ್ರತಿಭಟನೆಗೆ ಮರುಪ್ರತಿಭಟನೆಕುಳಿತ ಅವರನ್ನು ಪೊಲೀಸರು ಬಲ ಬಲವಂತವಾಗಿ ಜೀಪಿನಲ್ಲಿ ಹಾಕಿ ಕರೆದುಕೊಂಡು ಹೋದರು.