ಬೆಳಗಾವಿ,:ನರಸಮಸ್ಯೆಯಿಂದ ಬಳಲುತ್ತ ಕಣ್ಣಿನದೃಷ್ಠಿ ಮಂದವಿರುವ ಮಕ್ಕಳ ಭವಿಷ್ಯಕ್ಕಾಗಿ ಖಾಸಗಿ ವೈದ್ಯಕೀಯ ಸಂಸ್ಥೆಗಳು ಸರಕಾರದೊಂದಿಗೆ ಜೊತೆಗೂಡಿ, ಸಮಾಜವನ್ನು ಆರೋಗ್ಯವಾಗಿಡಲು ಸಂಶೋಧನೆ ಹಾಗೂ ಅದರ ಪರಿಣಾಮಗಳನ್ನು ಅನುಷ್ಠಾನಕ್ಕೆ ತರಲು ಸದಾ ಕಾರ್ಯನಿರತವಾಗಿರಬೇಕೆಂದು ಕಾಹೆರನ ಉಪಕುಲಪತಿ ಡಾ. ನಿತಿನ ಗಂಗಾಣೆ ಅವರಿಂದಿಲ್ಲಿ ಹೇಳಿದರು.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ನೇತ್ರವೈದ್ಯರಾದ ಡಾ. ಸ್ಮಿತಾ ಪ್ರಭು ಅವರು ಅಭಿವೃದ್ದಿಡಿಸಿದ “Ikshana” ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿ, ನರಸಮಸ್ಯೆಯಿಂದ ಬಳಲುತ್ತಿರುವ ಚಿಕ್ಕಮಕ್ಕಳು ನೇತ್ರದೋಷ ಹೊಂದಿರುತ್ತಾರೆ. ಅವರ ಸಾಮಾಜಿಕ ಭವಿಷ್ಯಕ್ಕಾಗಿ ಸಂಶೋಧನೆಗಳ ಅಗತ್ಯ ಸಾಕಷ್ಟಿದೆ. ಆದರೆ ಅವುಗಳ ಕಾರ್ಯರೂಪಕ್ಕೆ ತರುವಲ್ಲಿ ಹಿಂದೆ ಬೀಳುತ್ತಾರೆ. ಅಲ್ಲದೇ ವೈದ್ಯಕೀಯ ದಾಖಲೆಗಳನ್ನು ಸರಿಯಾಗಿ ದಾಖಲಿಸುವುದಿಲ್ಲ. ಇದರಿಂದ ಚಿಕಿತ್ಸೆಯಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ವೈದ್ಯಕೀಯ ದಾಖಲೆಗಳನ್ನು ಸರಿಯಾಗಿ ದಾಖಲಿಸಿ ಸುರಕ್ಷಿತವಾಗಿಡಿ ಎಂದು ತಿಳಿಸಿದರು.
ಈ ಮೊದಲು ಎಲ್ಲ ವೈದ್ಯಕೀಯ ಉಪಕರಣಗಳನ್ನು ವಿದೇಶದಿಂದ ತರಲಾಗುತ್ತಿತ್ತು. ಇವುಗಳ ಬೆಲೆ ಸಾಮನ್ಯವಾಗಿ ಹೆಚ್ಚು. ಇಂದು ನಮ್ಮಲ್ಲಿಯೇ ಅನೇಕ ವೈದ್ಯರು ಇಂಜಿನಿಯರಗಳಾಗಿದ್ದಾರೆ. ಅವರು ವೈದ್ಯಕೀಯ ಸಲಕರಣೆ ತಯಾರಿಸಿ, ಉತ್ತಮ ರೀತಿಯಿಂದ ಕಾರ್ಯನಿರ್ವಹಿಸಿ ಸಾಮಾಜಕ್ಕೆ ನೆರವಾಗುವ ಕಾರ್ಯ ಮಾಡಬೇಕೆಂದು ಕರೆ ನೀಡಿದರು.
ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಅವರು ಮಾತನಾಡಿ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡುವವರೆ ಹೆಚ್ಚಿದ್ದಾರೆ. ಆದರೆ ನರಸಮಸ್ಯೆಯಿಂದ ಬಳಲುತ್ತಿರುವ ಚಿಕ್ಕಮಕ್ಕಳ ಕಾಳಜಿವಹಿಸಿ ಅವರ ದೃಷ್ಠಿಯನ್ನು ಮರಳಿ ತರಲು ಪ್ರಯತ್ನಿಸಬೇಕಾಗಿದೆ. ಹೆಚ್ಚಿನ ಅಪಾಯದ ಶಿಶುಗಳನ್ನು ಗುರುತಿಸಲು ಈ ಮೊಬೈಲ್ ಆಪ್ ಸಹಾಯ ಮಾಡಲಿದೆ. ಸ್ಕಾಟಿಕಲ್ ದೃಷ್ಟಿಹೀನತೆಯ ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯು ಮಕ್ಕಳಿಗೆ ಪ್ರಯೋಜನವಾಗಲಿದೆ. ದೃಷ್ಟಿದೋಷವು ಮಕ್ಕಳ ಬೆಳವಣಿಗೆಗೆ ಮತ್ತಷ್ಟು ಅಡ್ಡಿಪಡಿಸುತ್ತದೆ. ಆದ್ದರಿಂದ ಸಂಶೋಧನೆಗಳು ಹಾಗೂ ವೈದ್ಯಕೀಯ ಉಪಕರಣಗಳು ಅತ್ಯವಶ್ಯ ಎಂದು ಹೇಳಿದರು.
ಹುಬ್ಬಳ್ಳಿಯ ಎಂ ಎಂ ಜೋಷಿ ಕಣ್ಣಿನ ಸಂಸ್ಥೆಯ ಡಾ. ಕೃಷ್ಣಪ್ರಸಾದ ಆರ್. ಅವರು ಮಾತನಾಡಿ, ಬದಲಾವಣೆ ಯಾವಾಗಲೂ ಹೊರಗಿನಿಂದ ಬರಬೇಕೆಂದು ನಾವು ಬಯಸುತ್ತೇವೆ. ಇದು ಬಹು ಶಿಸ್ತಿನ ವಿಷಯವಾಗಿದ್ದು, ನಮ್ಮಲ್ಲಿಂದಲೇ ಬದಲಾವಣೆಯಾಗಬೇಕು. ಶಸ್ತ್ರಚಿಕಿತ್ಸಾ ವಿಭಾಗ, ಫಿಸಿಯೋಥೆರಪಿ ಮಕ್ಕಳ ಮನಶ್ಶಾಸ್ತ್ರಜ್ಞ, ಮನೋವೈದ್ಯಕೀಯ ಸೇರಿದಂತೆ ಒಬ್ಬ ಮನುಷ್ಯನನ್ನು ಆರೋಗ್ಯವಾಗಿಡಲು ಅವಶ್ಯವಿರುವ ಎಲ್ಲ ವಿಭಾಗಗಳು ಇವೆ. ಅವರೆಲ್ಲರೂ ಉತ್ತಮ ಪ್ರದರ್ಶನವನ್ನು ನೀಡಲು ಒಟ್ಟಾಗಿ ಪರಿಪೂರ್ಣ ತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ತಜ್ಞವೈದ್ಯರಾದ ಡಾ. ವಿ ಡಿ ಪಾಟೀಲ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕುಲಸಚಿವ ಡಾ. ಎಂ ಎಸ್ ಗಣಾಚಾರಿ, ಉಪಪ್ರಾಚಾರ್ಯ ಡಾ. ರಾಜೇಶ ಪವಾರ, ಡಾ. ಆರಿಫ್ ಮಾಲ್ದಾರ, ತಜ್ಞ ಡಾ.ಅರವಿಂದ ತೆನಗಿ ಹಾಗೂ ಡಾ.ಎಸ್.ಬಿ.ಪಾಟೀಲ್, ಡಾ.ಭಾಗ್ಯಜ್ಯೋತಿ, ಡಾ.ಚೇತನಾ, ಮಕ್ಕಳ ನರರೋಗ ತಜ್ಞವೈದ್ಯರಾದ ಡಾ.ಮಹೇಶ ಕಮತೆ, ಮಕ್ಕಳ ಮನೋವೈದ್ಯ ಡಾ.ವಿನಾಯಕ ಕೋಪರ್ಡೆ, ನವಜಾತ ಶಿಶುಗಳ ತಜ್ಞವೈದ್ಯರಾದ ಡಾ. ರಾಮಚಂದ್ರ ಭಟ್, ಡಾ ಮೀನಾ, ಡಾ ನೇಹಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ಡಾ.ಶಿವಾನಂದ ಬೂಬನಾಳೆ ಸ್ವಾಗತಿಸಿದರು. ಡಾ. ಸ್ಮಿತಾ ಪ್ರಭು ವಂದಿಸಿದರು.