ಬೆಳಗಾವಿ: ಪ್ರತಿ ಬಾರಿ ರಾಜ್ಯಕ್ಕೆ ಬಂದಾಗ ಪ್ರಧಾನಿ ಮೋದಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ. ಹೆಣ್ಣು ಮಕ್ಕಳ ತಾಳಿ, ಕೈ ಬಳೆ ಬಗ್ಗೆ ಸುಳ್ಳು ಹೇಳ್ಕೊಂಡು ತಿರುಗುವ ಮೋದಿಯಿಂದ ಪ್ರಧಾನಿ ಹುದ್ದೆಗೆ ಮರ್ಯಾದೆ ಬರಲ್ಲ. ಆದ್ದರಿಂದ ಸುಳ್ಳುಗಳ ಮೂಲಕ ನಿಮಗೆ ಬಕ್ರಾ ಮಾಡುವ ಮೋದಿಗೆ ಅಧಿಕಾರ ನೀಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಗವಾಡ ತಾಲ್ಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಕಾಗವಾಡ, ಅಥಣಿ, ಕುಡಚಿ, ರಾಯಬಾಗ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ 2 ಚುನಾವಣೆ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಷ್ಟೊಂದು ಸುಳ್ಳು ಹೇಳೋ ಮೋದಿಗೆ ನಾಚಿಕೆನೂ ಆಗಲ್ಲ. ಇವರಿಗೆ ಮಾನ ಮರ್ಯಾದೆನೂ ಇಲ್ಲ. ಈ ಪ್ರಧಾನಿ ಮೋದಿ ಯಾವ ಮಟ್ಟದ ಸುಳ್ಳು ಸೃಷ್ಟಿ ಮಾಡ್ತಾರಲ್ಲಾ ನಾಚ್ಕೆನೂ ಆಗಲ್ಲ ಎಂದು ಮೋದಿ ಅವರ ಸುಳ್ಳುಗಳನ್ನು ಪಟ್ಟಿ ಮಾಡಿದ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ಮುಂದುವರೆಸಿದರು.
ಕಿತ್ತೂರು ರಾಣಿ ಜಯಂತಿ ಆಚರಣೆಗೆ ಆದೇಶಿಸಿದ್ದು ನಾವು, ಬೊಮ್ಮಾಯಿ ಮಾಡ್ಲಿಲ್ಲ, ಯಡಿಯೂರಪ್ಪ ಮಾಡ್ಲಿಲ್ಲ. ನಾವು ಯಾವತ್ತೂ ಶಿವಾಜಿ ಮಹಾರಾಜರನ್ನು ಅವಮಾನಿಸಿಲ್ಲ. ಆದರೆ ಈ ಮೋದಿ ಬೆಳಗಾವಿಗೆ ಬಂದು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ನವರು ರಾಣಿ ಚನ್ನಮ್ಮರಿಗೆ ಮತ್ತು ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿದ್ದೀವಿ ಎಂದು ಸುಳ್ಳು ಹೇಳ್ತೀರಲ್ಲಾ , ಸುಳ್ಳಿಗೆ ಒಂದು ಮಿತಿಯಾದರೂ ಬೇಡ್ವಾ ಮೋದಿ ಎಂದು ಮಾತಿನಲ್ಲೇ ಕುಟುಕಿದರು.
ಈಗ ಮೋದಿ ಹಿಂದುಳಿದ ಜಾತಿ ಸಮುದಾಯಗಳನ್ನು ಮುಸ್ಲೀಮರ ವಿರುದ್ಧ ಎತ್ತಿಕಟ್ಟಲು ಭಯನಾಕ ಸುಳ್ಳು ಸೃಷ್ಟಿಸಿದ್ದಾರೆ. ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲೀಮರಿಗೆ ಕೊಡ್ತಾರೆ ಎನ್ನುವ ಭತಾನಕ ಸುಳ್ಳು ಹೇಳಿದ ಮೋದಿಯವರಿಗೆ ನಾಚಿಕೆ ಅನ್ನೋದೇ ಇಲ್ಲ ಎಂದರು.
ಪ್ರತಿ ಭಾರತೀಯರ ಖಾತೆಗೆ 15 ಲಕ್ಷ ಹಾಕ್ತೀವಿ ಎಂದು ನಂಬಿಸಿ ಪ್ರತಿ ಭಾರತೀಯರ ಹಣೆಗೆ ಮೂರು ನಾಮ ತಿಕ್ಕಿದ್ರು. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಎಂದು ನಂಬಿಸಿ ಕೆಲಸ ಕೇಳಿದ್ರೆ ಪಕೋಡ ಮಾರಿ ಅಂತೀರಿ. ಥೂ ನಿಮಗೆ ನಾಚಿಕೆನೇ ಆಗಲ್ವಾ ಎಂದು ಪ್ರಶ್ನಿಸಿದರು.
ಡಾಲರ್ ಎದುರು ರೂ. ಮೌಲ್ಯ ಇಳಿಸ್ತೀವಿ ಅಂದ್ರಿ, ಇಳಿಸಿದ್ರಾ? ಬೆಲೆ ಏರಿಕೆ ತಡಿತೀವಿ ಅಂದ್ರಿ. ತಡೆದ್ರಾ ? ಪ್ರತೀ ಬಾರಿ ರಾಜ್ಯಕ್ಕೆ ಬರೋದು ಹೊಸ ಹೊಸ ಸುಳ್ಳು ಹೇಳಿ ಹೋಗೋದು. ಇನ್ನೂ ಎಷ್ಟು ವರ್ಷ ಹಿಂದುಳಿದ ಜಾತಿ-ಸಮುದಾಯಗಳನ್ನು ನಂಬಿಸಿ ವಂಚಿಸ್ತೀರಿ? ಸುಳ್ಳು ಹೇಳ್ಕೊಂಡು ತಿರುಗ್ತೀರಿ ಎಂದು ಕೇಳಿದರು.
ನುಡಿದಂತೆ ನಡೆದ ಪಕ್ಷ ಕಾಂಗ್ರೆಸ್: ಬಿಜೆಪಿ ಭಾರತೀಯರ ಭಾವನೆಗಳ ಜೊತೆ ಚೆಲ್ಲಾಟ ಆಡ್ಕೊಂಡು ಲಾಭ ಮಾಡಿಕೊಳ್ತಾರೆ. ಆದರೆ ನಾವು ಕಾಂಗ್ರೆಸ್ಸಿವರು ಜನರ ಬದುಕಿನ ಸಂಕಷ್ಟಗಳನ್ನು ಕಡಿಮೆ ಮಾಡಲು ಕಾರ್ಯಕ್ರಮ ರೂಪಿಸಿ ಜಾರಿ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಮಾತನ್ನು ಈಡೇರಿಸಿದ ನೈತಿಕತೆಯಿಂದ ನಾವು ನಿಮ್ಮ ಮುಂದೆ ಬಂದು ಮತ ಕೇಳುತ್ತಿದ್ದೇವೆ ಎಂದರು.
ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ : ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಪ್ರತೀ ವರ್ಷ ಮಹಿಳಾ ಯಜಮಾನಿಯ ಖಾತೆಗೆ ಒಂದು ಲಕ್ಷ ರೂ. ಜಮೆ ಆಗತ್ತೆ. ಇಡೀ ದೇಶದ ರೈತರ ಸಾಲ ಮನ್ನಾ ಆಗತ್ತೆ. ನಿರುದ್ಯೋಗಿ ಯುವಕ ಯುವತಿಯರಿಗೆ ಲಕ್ಷ ರೂಪಾಯಿ ಸಿಗತ್ತೆ. ಸ್ವಾಮಿನಾಥನ್ ವರದಿಯಂತೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಜಾರಿ ಆಗತ್ತೆ. ಇದಕ್ಕಾಗಿ ಕಾಯ್ದೆ ಮಾಡ್ತೀವಿ. ಇಂತಹ 25 ಗ್ಯಾರಂಟಿಗಳಿಗೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸಹಿ ಹಾಕಿದ್ದಾರೆ. ಹೀಗಾಗಿ ಸುಳ್ಳುಗಳ ಮೂಲಕ ನಿಮಗೆ ಬಕ್ರಾ ಮಾಡುವ ಮೋದಿಗೆ ಮತ ಹಾಕ್ತೀರೋ, ನುಡಿದಂತೆ ನಡೆದ ನಮಗೆ ಮತ ಹಾಕ್ತೀರೋ ತೀರ್ಮಾನಿಸಿ ಎಂದು ಕರೆ ನೀಡಿದರು.