ಬೆಳಗಾವಿ : ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರೀತಿಯಿಂದ ಬೋಧನೆ ಮಾಡಬೇಕು. ಮಕ್ಕಳು ಶಿಕ್ಷಕರು ಕಲಿಸುವ ಭಾಷೆ, ವಿದ್ವತ್ ಹೇಗೆ ಇದೆ ಎನ್ನುವುದನ್ನು ಸದಾ ಗಮನಿಸುತ್ತಾ ಇರುತ್ತಾರೆ. ಈ ನಿಟ್ಟಿನಲ್ಲಿ ಸದಾ ಜಾಗೃತರಾಗಿ ಬೋಧನೆ ಮಾಡಬೇಕು ಎಂದು ಬೆಂಗಳೂರು ವೀರೇಶಾನಂದಜೀ ಮಹಾರಾಜ ಅವರಿಂದಿಲ್ಲಿ ತಿಳಿಸಿದರು.

ನಗರದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ಉದ್ಘಾಟನೆಯ ಸವಿನೆನಪಿಗೆ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ಸಮ್ಮೇಳನದಲ್ಲಿ ಅವರು ಕಲಿಕೆ ಎಂಬ ಸಂತಸದ ಸಾಹಸ ವಿಷಯವಾಗಿ ಮಾತನಾಡಿದರು.

ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ನೀಡುವವನೆ ಶಿಕ್ಷಕ. ಶಾಲೆಗೆ ಹೋಗುವಾಗ ನಿಮಗೆ ಧನ್ಯತೆಯ ಭಾವ ಇರಬೇಕು. ಹಲವಾರು ರೀತಿಯ ಮಕ್ಕಳು ಶಾಲೆಗೆ ಬಂದಿರುತ್ತಾರೆ. ಅವರಿಗೆ ಶಾಲೆಯಲ್ಲಿ ನೀವೇ ತಂದೆ-ತಾಯಿ ಇದ್ದಂತೆ. ವಿದ್ಯಾಭ್ಯಾಸ ಹೊಸ ಜ್ಞಾನ ನೀಡುತ್ತದೆ. ಶಿಕ್ಷಕರು ಪುಣ್ಯವಂತರು. ಎಂಥ ಪುಣ್ಯದ ಕೆಲಸ ನೀವು ಮಾಡುತ್ತಿದ್ದೀರಿ ಎಂಬ ಅರಿವು ನಿಮ್ಮಲ್ಲಿ ಸದಾ ಜಾಗೃತವಾಗಿ ಇರಬೇಕು. ಅದರಂತೆ ಮಕ್ಕಳ ಬೇಕು-ಬೇಡಗಳ ಬಗ್ಗೆ ಗಮನಿಸಬೇಕು ಎಂದು ಹೇಳಿದರು.

ಮಕ್ಕಳನ್ನು ನೀವು ಪ್ರೀತಿಯಿಂದ ಕಾಣಬೇಕು. ನಿಸ್ವಾರ್ಥವಾಗಿ ಕಲಿಸಬೇಕು. ಪ್ರೀತಿಯೆಂಬ ಮಹಾ ಮಂತ್ರ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಉತ್ತರ ಕೊಡಬಲ್ಲದು. ಮಕ್ಕಳು ಪರಿಣಾಮಕಾರಿ ಪಾಠ ಹೇಗೆ ಕಲಿತುಕೊಳ್ಳುತ್ತಿದೆ ಎಂಬ ಪರಿಜ್ಞಾನ ಶಿಕ್ಷಕನಾದವನಿಗೆ ಇರಬೇಕು. ಮಗುವಿನಲ್ಲಿ ಅಪಾರವಾದ ಜ್ಞಾನ ಅಡಗಿರುತ್ತದೆ. ಅದನ್ನು ಹೊರ ತರುವ ಮಹತ್ತರ ಹೊಣೆ ಶಿಕ್ಷಕನ ಮೇಲೆ ಇರುತ್ತದೆ ಎಂದು ಹೇಳಿದರು.

ವ್ಯಕ್ತಿಗತವಾಗಿ ಶಿಕ್ಷಕರು ಕೆಲವು ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಪರಿಣಾಮಕಾರಿ ಬೋಧನೆ ಮಾಡಲು ಸಾಧ್ಯವಿದೆ. ಹಂತ ಹಂತವಾಗಿ ಶಿಕ್ಷಕರು ಬೋಧನಾ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಮಕ್ಕಳನ್ನು ಯಾವುದೇ ಕಾರಣಕ್ಕೂ ನಿಂದಿಸಲು ಹೋಗಬಾರದು. ಅವರಲ್ಲಿ ಶ್ರದ್ಧೆಯ ಜೊತೆಗೆ ಏಕಾಗ್ರತೆ ಬೆಳೆಸಬೇಕು. ಮಗುವಿಗೆ ಮನರಂಜನೆ ನೀಡಿ, ಆಕರ್ಷಣೀಯ ಓದಿನ ಕಡೆಗೆ ಒಲವು ಮೂಡಿಸುವುದು ಸಹಾ ಶಿಕ್ಷಕನ ಜವಾಬ್ದಾರಿ ಎಂದು ಹೇಳಿದರು.

ಗುಜರಾತ್ ರಾಜ್ಯದ ರಾಜಕೋಟ್ ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ನಿಖಿಲೇಶ್ವರಾನಂದಜೀ ಮಹಾರಾಜ, ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎನ್. ಮುರಳಿಧರ್ ಅವರು ಮಾತನಾಡಿದರು. ಬೆಳಗಾವಿ ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮ ಪ್ರಾಣಾನಂದ ಅವರು ಸ್ವಾಗತಿಸಿದರು.