ಬೆಳಗಾವಿ: ಭಾರತದಲ್ಲಿ ಎರಡನೇ ಅತೀ ದೊಡ್ಡ ವೈದ್ಯವಿಜ್ಞಾನವಾಗಿರುವ ಹೋಮಿಯೋಪತಿಯು ಅಧಿಕ ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯು ಮತ್ತು ಕ್ಯಾನ್ಸರ್‌ಗಳಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಪ್ರಬಲವಾದ ಔಷಧಗಳನ್ನು ಹೊಂದಿದೆ. ಪ್ರತಿಕೂಲ ಪರಿಣಾಮಗಳಿಲ್ಲದೇ ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ನವದೆಹಲಿಯ ಎಂಎಆರ್‌ಬಿ( ಮೆಡಿಕಲ್ ಅಸೆಸ್ಸಮೆಂಟ ರೇಟಿಂಗ ಬೋರ್ಡ ಫಾರ ಹೊಮಿಯೊಪಥಿ) ಯ ಅಧ್ಯಕ್ಷರಾದ ಡಾ. ಕೆ. ಆರ್ ಜನಾರ್ಧನನ ನಾಯರ ಅವರಿಂದಿಲ್ಲಿ ಹೇಳಿದರು.
ಕೆಎಲ್‌ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ್ ಆ್ಯಂಡ ರಿಸಚನ ಕೆಎಲ್‌ಇ ಹೊಮಿಯೋಪಥಿ ಮೆಡಿಕಲ್ ಕಾಲೇಜ ಮತ್ತು ಆಸ್ಪತ್ರೆ, ಕರ್ನಾಟಕ ಕ್ವಾಲಿಫೈಡ್ ಹೋಮಿಯೋಪತಿ ಅಸೋಸಿಯೇಶನ್‌ನ ಇವುಗಳ ಸಂಯುಕ್ತಾಶ್ರಯದಲ್ಲಿ ಹೋಮಿಯೋ ಹೀಲಿಂಗ್ ವಾಯೇಜ್, ಎ ಜರ್ನಿ ಟು ಎಕ್ಸಲೆನ್ಸ್ ಎಂಬ ರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ-2024 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೋಗ ತಡೆಗಟ್ಟುವಲ್ಲಿ ರೋಗನಿರೋಧಕ ಶಕ್ತಿಯು ಪ್ರಮುಖ ಪಾತ್ರವನ್ನು ವಹಿಸುತ್ತದೆ, ರೋಗವು ಭಾಧಿಸುವ ಸಂದರ್ಭದಲ್ಲಿ ವ್ಯಕ್ತಿಯ ಪ್ರತಿರಕ್ಷೆ ಕಾರ‍್ಯವು ಸುಪ್ತವಾಗಿರುವದರಿಂದ ರೋಗವು ತೀವ್ರವಾಗುತ್ತದೆ. ಹೋಮಿಯೋಪತಿ ಚಿಕಿತ್ಸೆಗಳು ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿರುತ್ತದೆ. ಯಾವುದೇ ಅಡ್ಡಪರಿಣಾಮಗಳಿಲ್ಲದ ನೈಸರ್ಗಿಕವಾಗಿ ಗುಣಪಡಿಸುವ ಕಾರ್ಯವಿಧಾನಗಳನ್ನು ಪುನರುತ್ಪಾದಿಸುವಲ್ಲಿ ಹೋಮಿಯೋ ಔಷಧಿಗಳು ಬಹಳ ಸಹಕಾರಿ ಎಂದ ಅವರು, ಅತ್ಯಂತ ಸರಳ ವಿಧಾನಗಳನ್ನು ಒಳಗೊಂಡಿರುವ ಈ ಚಿಕಿತ್ಸೆಯು ಬಹಳ ಪ್ರಯೋಜನಕಾರಿ. ರೋಗಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತ, ಸಹಾನುಭೂತಿಯೊಂದಿಗೆ ಚಿಕಿತ್ಸೆ ನೀಡಲು ಮತ್ತು ಆರೋಗ್ಯ ರಕ್ಷಣೆಗೆ ಅವಶ್ಯವಿರುವ ವಿಧಾನಗಳನ್ನು ಅನುಸರಿಸಬೇಕು. ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನಾಗಿರುತ್ತದೆ. ಆದ್ದರಿಂದ ಅವರ ಅಗತ್ಯತೆ ಹಾಗೂ ಅವರ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಇಲ್ಲಿ ತಾಳ್ಮೆ ಅತ್ಯಂತ ಮುಖ್ಯವಾಗಿರುತ್ತದೆ ಎಂದರು.
ನವದೆಹಲಿಯ ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಕರ‍್ಯದರ್ಶಿ ಡಾ. ಸಂಜಯ್ ಗುಪ್ತಾ ಅವರು, ವೈದ್ಯಕೀಯ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್ ಗಳನ್ನು ಸಂಯೋಜಿಸಲು ಅಗತ್ಯವಿರುವ ಸಹಕಾರವನ್ನು ನೀಡಲಾಗುತ್ತದೆ. ನೂತನ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡು ಒಂದೇ ಸೂರಿನಡಿ ಹೊಮಿಯೊಪಥಿಗೆ ಅವಶ್ಯವಿರುವ ನೀತಿ ನಿರೂಪಣೆಯನ್ನು ಹಂತಹಂತವಾಗಿ ಜಾರಿಗೆ ತರಲಾಗುತ್ತದೆ. ಹೊಮಿಯೊಪತಿ ವೈದ್ಯರಿಗೂ ಕೂಡ ಅಗತ್ಯ ತರಬೇತಿ ನೀಡಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಕೆಎಲ್‌ಇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿತಿನ್ ಗಂಗಾನೆ ಅವರು ಮಾತಾನಡಿ, ಕೃತಕ ಬುದ್ದಿಮತ್ತೆ ಮತ್ತು ಡಾಟಾ ಸೈನ್ಸ್ ಕೋರ್ಸ್ಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದ್ದು, ಅನುಮೋದನೆಗಾಗಿ ಹೋಮಿಯೋಪತಿ ಕೌನ್ಸಿಲ್‌ಗೆ ಕಳುಹಿಸಿಕೊಡಲಾಗಿದೆ. ಗುಣಾತ್ಮಕ ಸಂಶೋಧನೆಗೆ ಆರ್ಥಿಕ ಸಹಾಯ ಹಾಗೂ ಅಗತ್ಯವಿರುವ ಸಹಕಾರವನ್ನು ನೀಡಲಾಗುತ್ತದೆ. ಆದ್ದರಿಂದ ಹೆಚ್ಚೆಚ್ಚು ಸಂಶೋಧನೆಗಳನ್ನು ಕೈಗೊಳ್ಳುವಂತೆ ಕರೆ ನೀಡಿದ ಅವರು, ಹೊಮಿಯೊಪತಿ ಜರ್ನಲ್ ವಿಷೇಶ ಸಂಚಿಕೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ಕ್ವಾಲಿಫೈಡ್ ಹೋಮಿಯೋಪತಿ ಅಸೋಸಿಯೇಶನ್‌ನ ಅಧ್ಯಕ್ಷ ಡಾ.ಶ್ರೀಪಾದ್ ಹೆಗಡೆ ಅವರು ಮಾತನಾಡಿದರು. 41 ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು. ಸಮ್ಮೇಳನದಲ್ಲಿ 11 ರಾಜ್ಯಗಳ 950 ಕ್ಕೂ ಅಧಿಕ ಪ್ರತಿನಿಧಿಗಳನ್ನು ಭಾಗವಹಿಸಿದ್ದರು. ಕೆಎಲ್‌ಇ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಡಾ. ಎಂ. ಎ. ಉಡಚನಕರ ಅವರು ಸ್ವಾಗತಿಸಿದರು. ಕೆಎಲ್‌ಇ ಹೋಮಿಯೋಪತಿ ಕಾಲೇಜಿನ ಪ್ರಾಚರ‍್ಯರಾದ ಡಾ ಸ್ವರೂಪ ಪಾಟೀಲ ಅವರು ವಂದಿಸಿದರು. ಸಮ್ಮೇಳನದಲ್ಲಿ ಡಾ. ನಾಯರ್ ಮತ್ತು ಡಾ. ಸಂಜಯ್ ಗುಪ್ತಾ ಅವರನ್ನು ಸನ್ಮಾನಿಸಲಾಯಿತು.