ಬೆಳಗಾವಿ: ‘ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ನಮ್ಮ ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದೇವೆ. ಅದನ್ನು ಈಡೇರಿಸಲೂ ಬದ್ದರಾಗಿದ್ದೇವೆ. ಆದರೆ, ಹೋರಾಟ ದಾರಿ ತಪ್ಪಬಾರದು. ಯಾರೂ ಹೋರಾಟದಿಂದ ಹಿಂದೆ ಸರಿಯುವುದು ಬೇಡ. ನಾನು ಸಮುದಾಯಕ್ಕೆ ನ್ಯಾಯ ಕೊಡಿಸುತ್ತೇನೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ನಗರದಲ್ಲಿ ನಡೆದ ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ‘ಡಿ. 5ರಂದು ಆಯೋಜಿಸಿರುವ ಸರ್ವಪಕ್ಷಗಳಲ್ಲಿರುವ ಲಿಂಗಾಯತ ಪಂಚಮಸಾಲಿ ಸಮುದಾಯದ ಶಾಸಕರು ಹಾಗೂ ಮಾಜಿ ಶಾಸಕರ ಸಭೆಗೆ ಮುಖ್ಯಮಂತ್ರಿ ಆಹ್ವಾನಿಸಬೇಕು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ’ ಎಂದು ಹೇಳಿದರು.

‘ಮುಂದಿನ ಪೀಳಿಗೆಯ ಉಜ್ವಲ ಜೀವನಕ್ಕಾಗಿ ಮೀಸಲಾತಿ ಅಗತ್ಯ. ಅದಕ್ಕಾಗಿ ಹೋರಾಟ ಅನಿವಾರ್ಯ. ಬೇರೆಯವರಿಗೆ ಮೀಸಲಾತಿ ಕೊಟ್ಟಾಗ ನಾವು ಬೇಸರ ಪಟ್ಟುಕೊಂಡಿಲ್ಲ. ಯಾರ ತುತ್ತನ್ನೂ ನಾವು ಕಸಿಯುವುದಿಲ್ಲ. ಬೇರೆಯವರಿಗೆ ನಾಲ್ಕು ತುತ್ತು ಕೊಟ್ಟು, ಒಂದು ತುತ್ತು ತಿನ್ನುವವರು ನಾವು. ನಾನು ಹೊರಗಿದ್ದರೂ ಹೋರಾಟ ಮಾಡುತ್ತೇನೆ. ಒಳಗಿದ್ದರೂ ಹೋರಾಟ ಮಾಡುತ್ತೇನೆ. ಪಂಚಮಸಾಲಿ ಸಮುದಾಯದ ಶಾಸಕರಷ್ಟೇ ಸಭೆ ನಡೆಸುವುದು ಬೇಡ. ನಮ್ಮ ಬೆಂಬಲದಿಂದ ಇನ್ನೂ ಹಲವು  ಶಾಸಕರು ಆಯ್ಕೆಯಾಗಿದ್ದಾರೆ. ಹೋರಾಟಕ್ಕೆ ಅವರೆಲ್ಲರ ಬೆಂಬಲ ಪಡೆಯೋಣ’ ಎಂದು ತಿಳಿಸಿದರು.

‘ಬಸವಣ್ಣ, ಬಿ.ಆರ್‌. ಅಂಬೇಡ್ಕರ್, ಕನಕದಾಸರು, ಏಸುಕ್ರಿಸ್ತ ಮತ್ತು ಮೊಹಮ್ಮದ್‌ ಪೈಗಂಬರ್‌ ಸೇರಿದಂತೆ ಎಲ್ಲರೂ ಸಮಾನತೆಯ ಸಂದೇಶ ಸಾರಿದ್ದಾರೆ. ನಮಗೂ ಸಮಾನತೆ ಬೇಕು. ಹಾಗಾಗಿ ಹೋರಾಟ ನಿರಂತರವಾಗಿರಲಿ. ಹೋರಾಟ ಮಾಡಿ ಹಕ್ಕು ಪಡೆಯೋಣ. ನಮ್ಮ ಹೋರಾಟಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಸವಜಯ ಮೃತ್ಯುಂಜಯ ಸ್ವಾಮೀಜಿ, ‘ಲಕ್ಷ್ಮಿ ಹೆಬ್ಬಾಳಕರ ಹಿಂದಿನಿಂದಲೂ ನಮ್ಮ ಜತೆಗಿದ್ದಾರೆ. ಈಗ ಅಧಿಕಾರದಲ್ಲಿದ್ದರೂ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಅವರು ನಮಗೆ ನ್ಯಾಯ ಕೊಡಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

‘ಬಿಜೆಪಿ ಸರ್ಕಾರ ನಮಗೆ ಕೊಟ್ಟ ಮಾತು ತಪ್ಪಿದ್ದರಿಂದ, ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸಮುದಾಯದ ಅರ್ಧಕ್ಕಿಂತ ಹೆಚ್ಚು ಜನರು ಕಾಂಗ್ರೆಸ್‌ ಬೆಂಬಲಿಸಿದರು. ಯಾವುದೇ ಸರ್ಕಾರ ಬಂದರೂ ಬೇಡಿಕೆ ಈಡೇರುವವರೆಗೂ ಹೋರಾಟ ಮಾಡಲಾಗುವುದು. ಲೋಕಸಭಾ ಚುನಾವಣೆ ಮುಗಿಯುವುದರೊಳಗೆ ಮೀಸಲಾತಿ ಕಲ್ಪಿಸುವಂತೆ ಸರ್ಕಾರಕ್ಕೆ ಗಡುವು ನೀಡಬೇಕಿದೆ’ ಎಂದು ಹೇಳಿದರು. ಎಚ್.ಎಸ್. ಶಿವಶಂಕರ, ಎ.ಬಿ. ಪಾಟೀಲ, ಶಶಿಕಾಂತ ನಾಯಿಕ, ಅಡಿವೇಶ ಇಟಗಿ, ಆರ್.ಕೆ. ಪಾಟೀಲ, ರುದ್ರಗೌಡ ಪಾಟೀಲ ಇದ್ದರು.ಬೆಳಗಾವಿ