ಬೆಳಗಾವಿ: ಕಬ್ಬಿನ ತೂಕದಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ಮಾಡುತ್ತಿರುವ ಮೋಸವನ್ನು ತಡೆಯಲು  ಕಠಿಣ ಕ್ರಮ ಜರುಗಿಸಲಾಗುತ್ತದೆ. ರೈತರು ನೀಡಿದ ದೂರನ್ನಾಧರಿಸಿ ಸಕ್ಕರೆ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಕಬ್ಬನ್ನು ಸಾಗಾಣಿಕೆ ಮಾಡುವ ಪೂರ್ವದಲ್ಲಿ ಎಪಿಎಂಸಿ ತೂಕದ ಯಂತ್ರದಲ್ಲಿ ಉಚಿತವಾಗಿ ತೂಕ ಮಾಡಿಸಿಕೊಳ್ಳಲು ಸರಕಾರ ಆದೇಶ ಮಾಡಲಿದೆ. ಯಾವುದದಾದರೂ ರೈತರಿಗೆ ಸಕ್ಕರೆ ಕಾರ್ಖಾನೆಯವರು ಮೋಸ ಮಾಡುತ್ತಿದ್ದಾರೆ ಎಂದು ಅನುಮಾನ ಬಂದರೆ ಎಪಿಎಂಸಿಯಲ್ಲಿ ತೂಕ ಮಾಡಿಸಿಕೊಂಡರೆ ಅವನಿಗೆ ನೈಜ ತೂಕದ ಬಗ್ಗೆ ಅರಿವು ಬರಲಿದೆ ಎಂದರು.

ರಾಜ್ಯದಲ್ಲಿ 167 ಎಪಿಎಂಸಿ ಇವೆ. ಅಲ್ಲಿ ತೂಕದ ಯಂತ್ರ ಇದ್ದೆ ಇವೆ. ಎಪಿಎಂಸಿ ತೂಕದಲ್ಲಿ ಹಾಗೂ ಸಕ್ಕರೆ ಕಾರ್ಖಾನೆಯಲ್ಲಿ ತೂಕದ ವ್ಯವಸ್ಥೆಯಲ್ಲಿ ಲೋಪ ಬಂದಾಗ ರೈತರು ದೂರು ನೀಡಿದರೆ ಮುಲ್ಲಾಜಿಲ್ಲದೆ ಅಂಥ ಸಕ್ಕರೆ ಕಾರ್ಖಾನೆಯ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಕೇಂದ್ರದ ನಿರ್ಧಾರದಿಂದ ಸಕ್ಕರೆ ಕಾರ್ಖಾನೆಗಳಿಗೆ ಆತಂಕ: ಎಥನಾಲ್ ಉತ್ಪಾದನೆ ಮಾಡುವವರಿಗೆ ಕೇಂದ್ರ ಸರಕಾರ ಪ್ರೋತ್ಸಾಹ ಕೊಟ್ಟು ಏಕಾಏಕಿ ಮಾಡಬೇಡಿ ಎಂದು ನಿರ್ಬಂಧ ಹಾಕಿದ್ದಾರೆ. ಸಕ್ಕರೆ ಕಾರ್ಖಾಯ ಮಾಲೀಕರು ಎಥೆನಾಲ್ ಉತ್ಪಾದಿಸಲು 200 ರಿಂದ 500 ಕೋಟಿ ರೂ. ವರೆಗೂ ಬಂಡವಾಳ ಹೂಡಿಕೆ ಮಾಡಿದ್ದಾರೆ. ಅವರ ಮೇಲೆ ಕೇಂದ್ರ ಸರಕಾರದ ನಿರ್ಧಾರದಿಂದ ಆತಂಕದಲ್ಲಿದ್ದಾರೆ ಎಂದರು.

ಸಕ್ಕರೆ ರಪ್ತು ಮಾಡಲು ಕೇಂದ್ರ ಸರಕಾರ ಅನುಮತಿ ನೀಡಬೇಕಿತ್ತು. ಇದರಿಂದ ಸ್ವಲ್ಪ ಲಾಭದಲ್ಲಿ ಕಾರ್ಖಾನೆಯ ಮಾಲೀಕರು ಇರುತ್ತಿದ್ದರು. ಅದನ್ನು ಬ್ಯಾನ್ ಮಾಡಿದ್ದಾರೆ. ಕೇವಲ ಸಕ್ಕರೆ ಮಾತ್ರವಲ್ಲ ತರಕಾರಿಯನ್ನು ಸಹ ಆಮದು, ರಪ್ತು ಮಾಡುವುದನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದೆ ಎಂದು ಆರೋಪಿಸಿದರು.

ಖಾನಾಪುರ ಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯ ಭ್ರಷ್ಟಾಚಾರದ ಕುರಿತು ಸರಕಾರ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಯುತ್ತಿದೆ. ವರದಿ ಬಂದ ಬಳಿಕ ಪ್ರತಿಕ್ರಿಯೆ ನೀಡುವೆ ಎಂದರು.