ಬೆಳಗಾವಿ, ಅ.11: ರಸ್ತೆ ನಿರ್ವಹಣೆ ಮಾಡಿದ ಬಿಲ್ ಅನ್ನು ಪಡೆಯಲು ಕಳೆದ ಒಂದು ವರ್ಷದಿಂದ ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ದ ಗುತ್ತಿಗೆದಾರರೊಬ್ಬರು ಬೆಳಗಾವಿಯ ಕೋಟೆ ಆವರಣದಲ್ಲಿರುವ ಲೋಕೋಪಯೋಗಿ ಇಲಾಖೆಯ ಕಚೇರಿ ಮುಂದೆ ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ ಘಟನೆ ಇಂದು ಜರುಗಿದೆ.
ವರ್ಕ್ ಆರ್ಡರ್ ಪಡೆದು ಕಾಮಗಾರಿ ಮಾಡಿದರೂ ಬಿಲ್ ನೀಡದ ಕಾರಣ ಗುತ್ತಿಗೆದಾರ ನಾಗಪ್ಪ ಬಂಗಿ ಅವರು ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಅಭಿಯಂತರ ಎಸ್ ಎಸ್ ಸೊಬರದ ಅವರ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ್ದಾರೆ. ಸದ್ಯಕ್ಕೆ ವಿಷ ಸೇವಿಸಿದ ಗುತ್ತಿದಾರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ವಿಷದ ಬಾಟಲ್ ಜೊತೆಗೆ ಲೋಕೋಪಯೋಗಿ ಇಲಾಖೆ ಕಚೇರಿ ಬಳಿ ಬಂದಿದ್ದ ನಾಗಪ್ಪ ಬಂಗಿ ಅವರು ಬೇಜವಾಬ್ದಾರಿ ತೋರಿದ ಅಧಿಕಾರಿಗಳು ಬರದಿದ್ರೇ ವಿಷ ಕುಡಿಯುವುದಾಗಿ ಎಚ್ಚರಿಕೆ ನೀಡಿದ್ದರು. ಕುಟುಂಬ ಸಮೇತ ಆಗಮಿಸಿ ಕಚೇರಿ ಮುಂದೆ ಧರಣಿ ಕುಳಿತಿದ್ದರು. ಅಧಿಕಾರಿಗಳಿಂದ ಸ್ಪಂದನೆ ಸಿಗದ ಕಾರಣ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಾಗಪ್ಪ ಅವರು 2022ರಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ಹಲಗಾ ಗ್ರಾಮದಿಂದ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ವರೆಗೆ ರಸ್ತೆ ಮಾಡಿದ್ದರು. ಇಲಾಖೆಯು ನಿರ್ಮಿಸಿದ್ದ ರಸ್ತೆ ನಿರ್ವಹಣೆಗೆ ವರ್ಕ್ ಆರ್ಡರ್ ಕೊಟ್ಟಿತ್ತು. 6 ಲಕ್ಷ 50 ಸಾವಿರ ವೆಚ್ಚದಲ್ಲಿ ಈಗಾಗಲೇ ಕಾಮಗಾರಿ ಮುಗಿಸಿದ್ದು ಕಾಮಗಾರಿ ಮುಗಿದರೂ ಬಿಲ್ ನೀಡದೆ ಅಧಿಕಾರಿಗಳು ತೊಂದರೆ ನೀಡುತ್ತಿರುವವದರಿಂದ ಅಭಿಯಂತರರಾದ ರಾಮೇಶ್ ಹೆಗಡೆ, ಬಸವರಾಜ ಹಲಗಿ ವಿರುದ್ಧ ಆಕ್ರೋಶ ಹೊರ ಹಾಕಿ ವಿಷ ಸೇವಿಸಿದ್ದಾರೆ. ಬಿಲ್ ಕೊಡಿ ಇಲ್ಲವಾದ್ರೇ ಕುಟುಂಬ ಸಮೇತ ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಧಿಕಾರಿಗಳಿಗೆ ಗುತ್ತಿಗೆದಾರ ನಾಗಪ್ಪ ಬಂಗಿ ಅವರು ಎಚ್ಚರಿಕೆಯ ಮನವಿ ಮಾಡಿಕೊಂಡಿದ್ದರು. ಲೋಕೋಪಯೋಗಿ ಸಚಿವರಾಗಿರುವ ಸತೀಶ ಜಾರಕಿಹೊಳಿ ಅವರ ತವರು ಜಿಲ್ಲೆ ಬೆಳಗಾವಿಯಲ್ಲಿ ಈ ರೀತಿ ಘಟನೆಗಳು ನಡೆಯುತ್ತಿರುವದು ವಿಷಾದನೀಯ.ಈ ಹಿಂದೆ ಬಿಲ್ ಮಂಜೂರು ಮಾಡದಿದ್ದಕ್ಕೆ ಸಂತೋಷ ಪಾಟೀಲ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದರು.