ಬೆಳಗಾವಿ: ಸ್ಮಾರ್ಟ ಯೋಜನೆಯಡಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೊಳ್ಪಡುವ ಶಹಾಪುರ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೆ ಪಿ.ಬಿ.ರಸ್ತೆಯವರೆಗೆ ನಿರ್ಮಿಸಿರುವ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಅದರ ಕುರಿತು ಉನ್ನತಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶಿವಾಜಿ ಉದ್ಯಾನದ ಬಳಿ ನಾಗರಿಕರ ಹಿತರಕ್ಷಣಾ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಬುಟ್ಟಿಯಲ್ಲಿ ಮರಳು, ಕಡಿ, ನಕಲಿ ನೋಟುಗಳನ್ನು ಹಿಡಿದು ಪ್ರತಿಭಟಿಸಿದರು. ಸ್ಮಾರ್ಟ ಸಿಟಿ ಅಧಿಕಾರಿಗಳು ಶಹಾಪುರ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೆ ಪಿ.ಬಿ.ರಸ್ತೆ ಅಗಲೀಕರಣವನ್ನು ಶಾಸಕ ಅಭಯ ಪಾಟೀಲ ಅವರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಕಾರ್ಯನಿರ್ವಹಿಸಿದ್ದಾರೆ. ಮನೆ ಕಳೆದುಕೊಂಡ ಜನ ನ್ಯಾಯಾಲಯದ ಮೋರೆ ಹೋಗಿ ಪರಿಹಾರ ಕೋರಿದ್ದಾರೆ. ನ್ಯಾಯಾಲದ ಆದೇಶವಿದ್ದರೂ ಕೂಡ ಪರಿಹಾರ ನೀಡದೇ ಅಕ್ರಮವಾಗಿ ರಸ್ತೆ ಅಗಲೀಕರಣ ಮಾಡಿದ್ದಾರೆ. ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿದ ಅಧಿಕಾರಿಗಳಿಂದಲೇ ನಷ್ಟದ ಪರಿಹಾರವನ್ನು ಕೊಡಿಸಲಾಗುವದು ಎಂದರು. ಈ ಕಾಮಗಾರಿಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿದ ಅಧಿಕಾರಿಗಳಿಂದಲೇ ಈ ನಷ್ಟದ ಪರಿಹಾರವನ್ನು ಕೊಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. .
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಮನವಿ ಸ್ವೀಕರಿಸಿ, ಅಕ್ರಮ ಕಾಮಗಾರಿ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಯಾರ ಮೂಲಕ ತನಿಖೆ ಮಾಡಿಸಬೇಕೆಂದು ನಿರ್ಧರಿಸುತ್ತೇವೆ. ತನಿಖಾ ವರದಿ ಆಧಾರದ ಮೇಲೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ನ್ಯಾಯಸಮ್ಮತವಾಗಿ ಸಂತ್ರಸ್ಥರಿಗೆ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದ ಅವರು, ಕಾಮಗಾರಿಯಲ್ಲಿ ಅವ್ಯವಹಾರ ಆಗಿರುವುದು ಮೇಲ್ನೊಟಕ್ಕೆ ಕಂಡು ಬಂದಿದೆ. ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸುಳ್ಳು ಕೇಸ್ ಹಾಕಿರುವ ಕುರಿತು ತನಿಖೆ ಮಾಡಿಸುತ್ತೇವೆ ಎಂದರು.
ಆಮ್ ಆದ್ಮಿ ಪಕ್ಷದ ಮುಖಂಡ ರಾಜಕುಮಾರ ಟೋಪಣ್ಣವರ ಮಾತನಾಡಿ, ಬೆಳಗಾವಿ ದಕ್ಷಿಣ ಶಾಸಕರು ಕೆಲ ಪೊಲೀಸ್ ಅಧಿಕಾರಿಗಳ ಮೂಲಕ ಭಯದ ವಾತಾವರಣ ನಿರ್ಮಿಸಿದ್ದಾರೆ. ಪ್ರಧಾನಿ ಮೋದಿಯವರು ನಾ ಕಾವುಂಗಾ, ನಾ ಕಾನೆದುಂಗಾ, ಮೈ ಚೌಕಿದಾರ ಎಂದು ಹೇಳುತ್ತಾರೆ. ಆದರೆ, ಬೆಳಗಾವಿ ದಕ್ಷಿಣ ಕಾ ಚೌಕಿದಾರ ಚೋರ್ ಹೈ. ಅಲ್ಲದೇ ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಅಭಿವೃದ್ಧಿ ಮಾಡುತ್ತಿದ್ದಾರೆ. ರಸ್ತೆ ಅಗಲೀಕರಣ ನಿಯಮಾನುಸಾರ, ವೈಜ್ಞಾನಿಕವಾಗಿಲ್ಲ. ಪಿಎಂಸಿ ಟ್ರ್ಯಾಕ್ ಟೇಬಲ್ ಇಂಡಿಯಾ ಸಾಮಾಜಿಕ ಪ್ರಭಾವದ ಮೌಲ್ಯಮಾಪನ ವರದಿಯನ್ನೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ನೀಡಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸುಜೀತ ಮುಳಗುಂದ, ಎನ್.ಆರ್.ಲಾತೂರ್, ವಿನಯ ನಾವಲಗಟ್ಟಿ, ಪ್ರದೀಪ ಎಂ.ಜೆ, ಪ್ರಭಾವತಿ ಮಾಸ್ತಮರಡಿ, ಪರಶುರಾಮ ಡಗೆ, ರಾಜನ್ ಹುಲಬತೆ, ರಾಘವೇಂದ್ರ ಲೋಕರಿ, ರಮೇಶ ಸೋಂಟಕ್ಕಿ, ರಮಾಕಾಂತ ಕೊಂಡುಸ್ಕರ್, ಸರಳಾ ಸಾತ್ಪುತೆ, ಶುಭಂ ಸೆಳಕೆ, ದೀಪಕ ಜಮಖಂಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
