ಬೆಳಗಾವಿ: ಬೆಳಗಾವಿಯಲ್ಲಿ ನಾಳೆ ಸೋಮವಾರ ರಾಜ್ಯದಲ್ಲೆ ಪ್ರಥಮ ಬಾರಿಗೆ 3 ಸಾವಿರ ಗರ್ಭಿಣಿಯರಿಗೆ ಸಾಮೂಹಿಕ‌ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ತವರು ಮನೆಯಲ್ಲಿ ಸಿಗುವ ಆತಿಥ್ಯದಂತೆ ಗರ್ಭಿಣಿಯರಿಗೆ ಉಡಿ ತುಂಬಿ, ಹೋಳಿಗೆ ಊಟ ಹಾಕುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಇಂದು ಬೆಳಗಾವಿಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಸಿಪಿಇಡ್ ಮೈದಾನದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ಸುಮಾರು 100 ಜನರಿಗೆ ತ್ರಿಚಕ್ರ ವಾಹನ, ಅಂಧ ಮಕ್ಕಳಿಗೆ ಬ್ರೇಲ್ ಲ್ಯಾಪಟಾಪ್ ವಿತರಣೆ ಸೇರಿ ಮತ್ತಿತರ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ರಾಜ್ಯದಲ್ಲೆ ಪ್ರಥಮ ಬಾರಿಗೆ 3 ಸಾವಿರ ಗರ್ಭಿಣಿಯರ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನೂ ಏರ್ಪಡಿಸಿದ್ದೇವೆ. 3 ತಿಂಗಳ ಗರ್ಭಿಣಿಯಿಂದ ಹಿಡಿದು 100 ವರ್ಷದ ಮನುಷ್ಯನ ಬದುಕು ಕಟ್ಟುವ ಸೇವೆ ನಮ್ಮ ಇಲಾಖೆ ಮಾಡುತ್ತಿದೆ ಎಂದರು.

ಹುಟ್ಟುವ ಮಗು ಮತ್ತು ತಾಯಿ ಆರೋಗ್ಯಪೂರ್ಣವಾಗಿರಲಿ. ತಾಯಿಯ ಮಾನಸಿಕ ವಿಕಸಿತವಾಗಲಿ, ಒಂದು ದಿನ ನಮ್ಮ ಇಲಾಖೆ ಜೊತೆ ಸಂತೋಷದಿಂದ ಕಳೆಯಲಿ ಎಂಬುದು ನಮ್ಮ ಉದ್ದೇಶವಾಗಿದೆ. ಐದು ಜಿಲ್ಲೆಗಳ ಸ್ತ್ರೀ ಶಕ್ತಿ ಸಂಘಗಳ ವಸ್ತು ಪ್ರದರ್ಶನ ಕೂಡ ನಡೆಯಲಿದೆ. ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತರು ಹಾಗೂ ವಿವಿಧ ಕ್ಷೇತ್ರಗಳಿಗೆ ಸಾಧನೆಗೈದವರಿಗೂ ಸನ್ಮಾನ ಮಾಡಲಾಗುವುದು ಎಂದರು.

ಬಹಳ ಬಿಸಿಲು ಇರುವ ಹಿನ್ನೆಲೆಯಲ್ಲಿ ಜರ್ಮನಿ ಟೆಂಟ್ ಹಾಕಿದ್ದೇವೆ. ನೀರು, ಬಿಸ್ಕೀಟ್, ಗ್ಲುಕೋಸ್ ಸೇರಿ ಎಲ್ಲ ರೀತಿ ವ್ಯವಸ್ಥೆ ಮಾಡಿದ್ದೇವೆ. ಗರ್ಭಿಣಿಯರನ್ನು ಕರೆದುಕೊಂಡು ಬರುವುದು ಮತ್ತು ವಾಪಸ್ಸು ಮನೆಗೆ ಮುಟ್ಟಿಸುವ ಜವಾಬ್ದಾರಿ ನಮ್ಮ ಅಂಗನವಾಡಿ ಕಾರ್ಯಕರ್ತೆಯರಿಗೆ ವಹಿಸಿದ್ದೇವೆ‌. ಪ್ರಾಯೋಗಿಕವಾಗಿ ನನ್ನ ಕ್ಷೇತ್ರದಿಂದಲೇ ವಿನೂತನ ಕಾರ್ಯಕ್ರಮ ಆರಂಭಿಸಿದ್ದೇವೆ. 26ರಂದು ಬಳ್ಳಾರಿಯಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಪ್ರಾಯೋಗಿಕವಾಗಿ ಇದು ಮೊದಲ ಪ್ರಯತ್ನವಾಗಿದ್ದು, ಇದರ ಯಶಸ್ಸು ನೋಡಿಕೊಂಡು ಮುಂದಿನ ವರ್ಷ ದೊಡ್ಡ ಮಟ್ಟದಲ್ಲಿ ಆಯೋಜಿಸಲಿದ್ದೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಕಾರ್ಯಕ್ರಮಕ್ಕೆ ರಾಜ್ಯಮಟ್ಟದ ನಾಯಕರು ಬರುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ನಾನು ಮತ್ತು ಸತೀಶ ಜಾರಕಿಹೊಳಿ ಅವರು ರಾಜ್ಯಮಟ್ಟದ ನಾಯಕರೇ ಆಗಿದ್ದೇವೆ ಎಂದು ಸಮರ್ಥಿಸಿಕೊಂಡರು.

2011ರ ನಂತರ ನಿವೃತ್ತಿಯಾದವರಿಗೂ ಗ್ರ್ಯಾಚುಟಿ ನೀಡುವಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಬೇಡಿಕೆ ಇದೆ. ಆದರೆ, 2023 ಫೆ.17ರಂದು ಬೊಮ್ಮಾಯಿ ಸರ್ಕಾರವು 2023ರ ನಂತರ ನಿವೃತ್ತಿಯಾದವರಿಗೆ ಗ್ರ್ಯಾಚುಟಿ ನೀಡುವ ಆದೇಶ ಹೊರಡಿಸಿದೆ. ಹಾಗಾಗಿ, ಮಾರ್ಚ್ 8ರಂದು ಸಾಂಕೇತಿಕವಾಗಿ ನಾಲ್ವರಿಗೆ ಗ್ರ್ಯಾಚುಟಿ ನೀಡಿದ್ದೇವೆ. 2023ರಿಂದ ನಿವೃತ್ತಿಯಾದವರಿಗೆ 39 ಕೋಟಿ ಹಣವನ್ನು ಹಂತ ಹಂತವಾಗಿ ಕೊಡುತ್ತಿದ್ದೇವೆ‌. ಇನ್ನು 2011 ರಿಂದ ನೀಡಬೇಕೋ, 2023ರಿಂದ ಕೊಡಬೇಕೋ ಅಥವಾ ಎರಡೆರಡು ವರ್ಷಗಳಂತೆ ಮಾಡಿಕೊಂಡು ಅವರ ಬೇಡಿಕೆ ಈಡೇರಿಸಬೇಕೊ ಎಂದು ವಿಚಾರ ಮಾಡುತ್ತಿದ್ದೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಹನಿಟ್ರಾಪ್ ವಿಚಾರ ಕಾಂಗ್ರೆಸ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ ಎಂಬ‌ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಕಾಂಗ್ರೆಸ್ ಪಕ್ಷದಲ್ಲಿ ಸದ್ದು ಮಾಡುತ್ತಿಲ್ಲ. ಸದನದಲ್ಲಿ ಹಿರಿಯ ಸಚಿವರು ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಇದು ಸಂಪೂರ್ಣವಾಗಿ ಸಚಿವರಾದ ರಾಜಣ್ಣ ಅವರಿಗೆ ಸಂಬಂಧ ಪಟ್ಟಿದೆ. ಆದರೆ, ಇದು ಬಹಳ ದುರಾದೃಷ್ಟಕರ, ಈ ರೀತಿ ಯಾರಿಗೂ ಆಗಬಾರದು. ತನಿಖೆ ಕುರಿತು ಮುಖ್ಯಮಂತ್ರಿಗಳು ಮತ್ತು ಗೃಹಸಚಿವರು ಮಾತನಾಡಿದ್ದು, ಅವರು ನಿರ್ಧರಿಸುತ್ತಾರೆ ಎಂದರು.

ಯಾರು ಗರ್ಜಿಸುತ್ತಾರೆ ಅವರನ್ನು ಹೆದರಿಸುವ ಕೆಲಸ ಆಗುತ್ತಿದೆ ಎಂಬ ಸತೀಶ ಜಾರಕಿಹೊಳಿ ಹೇಳಿಕೆಗೆ ಈ ಬಗ್ಗೆ ನೀವು ಅವರನ್ನೆ ಕೇಳಬೇಕು. ಸತೀಶ ಜಾರಕಿಹೊಳಿ ಅವರ ಪ್ರಶ್ನೆಗೆ ನಾನು ಉತ್ತರ ಕೊಡುವುದು ಸಮಂಜಸವಲ್ಲ ಎಂದರು.

ಗೃಹಲಕ್ಷ್ಮೀ ಹಣ ಬಿಡುಗಡೆ ಕುರಿತು ಈಗಷ್ಟೇ ಬಜೆಟ್ ಮುಗಿಸಿ ಬಂದಿದ್ದೇನೆ. ಬಜೆಟ್ ನಲ್ಲಿ ಎಲ್ಲರೂ ಬ್ಯುಜಿ ಆಗಿದ್ದರು‌. ಮಾರ್ಚ್ 31 ವರ್ಷದ ಕೊನೆಯದು. ಹಾಗಾಗಿ, ಮಾರ್ಚ್ 31 ಮುಗಿದ ತಕ್ಷಣ ಉಳಿದ ಎರಡು ಕಂತಿನ ಹಣ ಬಿಡುಗಡೆ ಮಾಡಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 6ನೇ ಗ್ಯಾರಂಟಿ ಯಾವಾಗ ಜಾರಿಗೆ ತರುತ್ತಿರಿ ಎಂಬ ಮಾಧ್ಯಮಗಳ ಪ್ರಶ್ನೆಗೆ 2017ರಂದು ಸಿಎಂ ಸಿದ್ದರಾಮಯ್ಯ ಅವರು 2 ಸಾವಿರ ರೂ. ಗೌರವಧನ‌ ಹೆಚ್ಚಿಸಿದ್ದರು. ಅದಾದ ಬಳಿಕ ಯಾವ ಸರ್ಕಾರವೂ ಹೆಚ್ಚಿಕೆ ಮಾಡಿಲ್ಲ. ಇನ್ನು ಕೇಂದ್ರ ಸರ್ಕಾರ 2 ಸಾವಿರ ರೂ. ಕೊಡುತ್ತದೆ. 9500 ರೂ. ರಾಜ್ಯ ಸರ್ಕಾರ ನೀಡುತ್ತದೆ. ಕಳೆದ 15 ವರ್ಷಗಳಿಂದ ಕೇಂದ್ರವು ಗೌರವಧನ ಹೆಚ್ಚಿಸಿಲ್ಲ. ಈ ಬಾರಿಯ ಬಜೆಟ್ ನಲ್ಲಿ ನಾವು ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರ ರೂ., ಸಹಾಯಕಿಯರಿಗೆ 750 ರೂ. ಘೋಷಣೆ ಮಾಡಿದ್ದೇವೆ. ಬರುವ ಮೂರು ವರ್ಷಗಳಲ್ಲಿ ಅವರ 6ನೇ ಗ್ಯಾರಂಟಿಯನ್ನೂ ಈಡೇರಿಸುತ್ತೇವೆ ಎಂದರು.