ಬೆಳಗಾವಿ : ಬೆಳಗಾವಿಗೆ ರೈಲ್ವೆ ನಿಲ್ದಾಣಕ್ಕೆ ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳ ಹೆಸರನ್ನು ನಾಮಕರಣಗೊಳಿಸಲು ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಪಡೆದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಂದಿಲ್ಲಿ ಹೇಳಿದರು.
ಬೆಳಗಾವಿಯಲ್ಲಿ ಡಾ. ಶಿವಬಸವ ಸ್ವಾಮೀಜಿಯವರ 135 ನೆಯ ಜಯಂತಿ ಮಹೋತ್ಸವದ ಅಂಗವಾಗಿ ಶ್ರೀ. ಹಾನಗಲ್ಲ ಕುಮಾರ ಮಹಾಶಿಯೋಗಿಗಳವರ ಕಂಚಿನ ಪುತ್ಥಳಿ ಅನಾವರಣ ಮತ್ತು ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿ ರೈಲು ನಿಲ್ದಾಣವನ್ನು ಆಧುನೀಕರಗೊಳಿಸಲಾಗಿದ್ದು, ಈ ಭಾಗದದಲ್ಲಿ ದಾಸೋಹದ ಮೂಲಕ ಶಿಕ್ಷಣ ನೀಡಿ ಲಿಂಗಾಯತ ಸಮುದಾಯವನ್ನು ಉನ್ನತಮಟ್ಟಕ್ಕೇರಿಸಿದ ಶಿವಬಸವ ಸ್ವಾಮಿಗಳ ಹೆಸರು ಸದಾ ಮೊಳಗುವಂತೆ ಬೆಳಗಾವಿಯ ರೈಲು ನಿಲ್ದಾಣಕ್ಕೆ ನಾಮಕರಣಗೊಳಿಸಲಾಗುವದು ಎಂದು ಹೇಳಿದರು.
ಸುರೇಶ್ ಅಂಗಡಿ ಅವರ ಕನಸಿನ ಹುಬ್ಬಳ್ಳಿ ಯಿಂದ ಬೆಳಗಾವಿಯವರೆಗೆ ಪ್ರತ್ಯೇಕ ರೈಲು ಮಾರ್ಗಕೆ ಅಗತ್ಯವಿರುವ ಜಮೀನನ್ನು ಮಾರ್ಚ್ 31ರೊಳಗೆ ರೈಲ್ವೆ ಇಲಾಖೆಗೆ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರಕ್ಕೆ ವಿನಂತಿ ಮಾಡಲಾಗಿದೆ. ಮೇ ತಿಂಗಳೊಳಗೆ ಈ ಕಾಮಗಾರಿ ಕಾರ್ಯಾರಂಭ ಮಾಡಲಾಗುವುದು ಎಂದು ತಿಳಿಸಿದರು.
ಶ್ರೀ ಶಿವಬಸವ ಸ್ವಾಮೀಜಿಯವರ ದೂರ ದೃಷ್ಟಿಯ ಚಿಂತನೆಯಿಂದ ಜರುಗಿದ ಕಾರ್ಯಗಳಿಂದಾಗಿ ಮತ್ತು ಅವರ ತಪಸ್ಸಿನ ಫಲವಾಗಿ ಇಂದು ಕೇವಲ 40 ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆ ಹೆಮ್ಮರವಾಗಿ ಬೆಳೆದು, ವಿಶ್ವದ ಭೂಪಟದಲ್ಲಿ ನಾಗನೂರು ಮಠ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ದಕ್ಷಿಣದಲ್ಲಿ ತುಮಕೂರಿನ ಸಿದ್ದಗಂಗಾ ಮಠ, ಉತ್ತರದಲ್ಲಿ ನಾಗನೂರು ರುದ್ರಾಕ್ಷಿ ಮಠ ಎರಡು ಮಠಗಳ ಸ್ವಾಮೀಜಿಗಳ ಹೆಸರು ಸೂರ್ಯ ಚಂದ್ರರು ಇರುವವರೆಗೂ ಅಜರಾಮರ ಎಂದು ನುಡಿದರು.
ಸಾನಿಧ್ಯವನ್ನು ವಹಿಸಿದ್ದ ಆನಂದಪುರಂ ಮುರುಘಾಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಇದಕ್ಕೂ ಮುನ್ನ ಶ್ರೀ. ಹಾನಗಲ್ಲ ಕುಮಾರ ಮಹಾಶಿವಯೋಗಿಗಳವರ ಕಂಚಿನ ಪುತ್ಥಳಿ ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಅಧ್ಯಕ್ಷತೆಯನ್ನು ಬೆಟ್ಟದಪುರ ಸಲೀಲಾಖ್ಯ ವಿರಕ್ತಮಠದ ಶ್ರೀ. ಚನ್ನಬಸವ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಕಟಕೋಳ ಕುಮಾರೇಶ್ವರ ಮಠದ ಶ್ರೀ. ಸಚ್ಚಿದಾನಂದ ಮಹಾಸ್ವಾಮಿಗಳು, ಮಣಕವಾಡ ದೇವಮಂದಿರ ಮಹಾಮಠದ ಶ್ರೀ. ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳಿಗೆ ಸನ್ಮಾನಿಸಲಾಯಿತು. ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಹಾಗೂ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಉಪಸ್ಥಿತರಿದ್ದರು.
ಸಂಸದ ಜಗದೀಶ್ ಶೆಟ್ಟರ್ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ ಅವರು ಮಾತನಾಡಿದರು. ಎಸ್. ಜಿ. ಬಿ .ಐ. ಟಿ. ಮಹಾವಿದ್ಯಾಲಯದ ಹವಾನಿಯಂತ್ರಿತ ಸಭಾಭವನವನ್ನು ನೈಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಶೋಕ ಖೇಣಿ ಅವರು ಉದ್ಘಾಟಿಸಿದರು. ಶ್ರೀಮಠದಿಂದ ಕೊಡ ಮಾಡುವ “ಸೇವಾ ರತ್ನ ಪ್ರಶಸ್ತಿ ವಿಧಾನಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ್ ಕವಟಗಿಮಠ, ಮಾಜಿ ಸಚಿವ ಎಸ್. ಎಸ್. ಪಾಟೀಲ್, ಬೆಂಗಳೂರಿನ ಪಾಲನೆತ್ರ, ಬೆಳಗಾವಿಯ ಶ್ರೀಮತಿ. ಶೈಲಜಾ ಭಿಂಗೆ, ಕೆಂಪಣ್ಣಾ ರಾಮಾಪುರಿ ಮತ್ತು ತಬಲಾ ವಾದಕ ಸತೀಶ್ ಗಚ್ಚಿ ಅವರುಗಳಿಗೆ ಪ್ರದಾನ ಮಾಡಲಾಯಿತು. ಮುಳವಾಡದ ಹಿರಿಯ ಸಾಹಿತಿ ಶ್ರೀ. ಫ.ಗು. ಸಿದ್ದಾಪುರ ವಿರಚಿತ ” ಮಹಾದಾಸೋಹಿ ಶಿವಬಸವ ” ಚೌಪದಿ ಮಹಾಕಾವ್ಯವನ್ನು ಮತ್ತು ಚಂದ್ರಶೇಖರ ಕಗ್ಗಲ್ಲುಗೌಡ್ರು ವಿರಚಿತ ” ಸ್ಪಿರಿಚುಯಾಲಿಟಿ ಇನ್ ಸಿಂಗಾಪುರ್ ” (ಲೈಫ್ ಸ್ಟೋರಿ ಆಫ್ ಎಂ.ಎಂ. ಸಾಖರೆ ) ಗ್ರಂಥಗಳು ಲೋಕಾರ್ಪಣೆಗೊಳಿಸಲಾಯಿತು. ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ ರೊಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಎ.ಕೆ. ಪಾಟೀಲ್ ನಿರೂಪಿಸಿದರೆ, ರಾಜಶೇಖರ ಪಾಟೀಲ್ ವಂದಿಸಿದರು.