ಬೆಳಗಾವಿ: ಸೇರಿದಂತೆ ಜಿಲ್ಲೆಯ ವಿವಿಧೆಡೆ ಮೂವರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದರು. ಮೂವರ ಮನೆಗಳಲ್ಲೂ ನೋಟುಗಳ ರಾಶಿ, ಚಿನ್ನಾಭರಣ, ಅಗತ್ಯ ದಾಖಲೆಗಳು ಹಾಗೂ ದಾಖಲೆಗಳಿಲ್ಲದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಡಿಬಿ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೋವಿಂದಪ್ಪ ಹಣಮಂತಪ್ಪ ಭಜಂತ್ರಿ ಅವರಿಗೆ ಸೇರಿದ ಸವದತ್ತಿಯ ಉಗರಗೋಳದ ಫಾರ್ಮ್ಹೌಸ್ನಲ್ಲಿ ಕಂತೆಕಂತೆ ಹಣ ಪತ್ತೆಯಾಗಿವೆ. 500 ರೂ. ಮುಖಬೆಲೆಯ ಒಟ್ಟು 49 ಲಕ್ಷ ರೂ.ಗಳ ನೋಟುಗಳು ಸಿಕ್ಕಿವೆ. ಉಳಿದಂತೆ, 1.85 ಲಕ್ಷ ರೂ.ಗಳ ಮೌಲ್ಯದ ಸ್ಥಿರಾಸ್ತಿ, ₹94.22 ಲಕ್ಷ ಮೌಲ್ಯದ ಚರಾಸ್ತಿಗಳು ಏಳು ಸ್ಥಳಗಳಲ್ಲಿ ಪತ್ತೆಯಾಗಿವೆ.
ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾಗಿರುವ ವೆಂಕಟೇಶ ಮುಜುಂದಾರ್ ಅವರ ಬೆಳಗಾವಿ ಮನೆ ಮೇಲೆ ದಾಳಿ ನಡೆದಿದ್ದು, ಈ ಮೊದಲು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಿದ್ದ ವೆಂಕಟೇಶ ಇಲ್ಲೂ ಐಶಾರಾಮಿ ಮನೆ ಖರೀದಿಸಿದ್ದಾರೆ. ಇವರಿಗೆ ಸೇರಿದ ಒಟ್ಟು ಐದು ಕಡೆ ದಾಳಿ ನಡೆಸಲಾಗಿದೆ. ಒಟ್ಟು 1.63 ಲಕ್ಷ ರೂ.ಗಳ ಸ್ಥಿರಾಸ್ತಿ, 58.43 ಲಕ್ಷ ರೂ.ಗಳ ಚರಾಸ್ತಿಗಳು ಸೇರಿದಂತೆ 2.21 ಕೋಟಿ ರೂ.ಗಳ ಆಸ್ತಿ ಕಂಡುಬಂದಿದೆ.
ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಶಿವಪ್ಪ ಢವಳೇಶ್ವರ ಅವರ ಮನೆ, ಕಚೇರಿ, ಸಂಬಂಧಿಕರ ಮನೆ ಸೇರಿ ನಾಲ್ಕು ಕಡೆ ದಾಳಿ ನಡೆಸಲಾಗಿದೆ. ಒಂದು ಮನೆ, 4 ಎಕರೆ ಕೃಷಿ ಜಮೀನು ಸೇರಿ 1.05 ಕೋಟಿ ರೂ.ಗಳ ಮೌಲ್ಯದ ಸ್ಥಿರಾಸ್ತಿ, 1.55 ಲಕ್ಷ ರೂ.ಗಳ ನಗದು, 3.02 ಲಕ್ಷ ರೂ.ಗಳ ಮೌಲ್ಯದ ಚಿನ್ನಾಭರಣ, 3.45 ಲಕ್ಷ ರೂ.ಬೆಲೆಯ ವಾಹನಗಳು ಸೇರಿ ₹8.02 ಲಕ್ಷ ರೂ.ಗಳ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಎರಡು ತಿಂಗಳ ಹಿಂದೆ ಬೆಳಗಾವಿಯಿಂದ ಬಾಗಲಕೋಟೆಗೆ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವೇಳೆ ವಿಠ್ಠಲ ಸಿಕ್ಕಿಬಿದ್ದಿದ್ದರು. ಅವರ ಬಳಿ ದಾಖಲೆ ಇಲ್ಲದ 1.10 ಕೋಟಿ ಹಣ ಪತ್ತೆಯಾಗಿತ್ತು. ರಾಮದುರ್ಗ ಚೆಕ್ಪೋಸ್ಟ್ ಅಧಿಕಾರಿಗಳು ದಾಳಿ ಮಾಡಿ ಹಣ ವಶಕ್ಕೆ ಪಡೆದಿದ್ದರು.
ಬೆಳಗಾವಿ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಹಣಮಂತರಾಯ ನೇತೃತ್ವದಲ್ಲಿ ದಾಳಿ ಮಾಡಲಾಯಿತು.
ಲೋಕಾಯುಕ್ತ ದಾಳಿ ಅಪಾರ ಸಂಪತ್ತು ವಶ
