ಬೆಳಗಾವಿ(ಚನ್ನಮ್ಮನ ಕಿತ್ತೂರು),: ಎಲ್ಲರಿಗೂ ಆರ್ಥಿಕ ಸ್ವಾತಂತ್ರ್ಯ ಹಾಗೂ ಸಮಾನತೆ ದೊರೆತಾಗ ಮಾತ್ರ ಜಾತಿ ವ್ಯವಸ್ಥೆ ವಿನಾಶಗೊಳಿಸುವುದು ಸಾಧ್ಯ. ಜಾತಿ ವ್ಯವಸ್ಥೆ ವಿರುದ್ಧ 12 ನೇ ಶತಮಾನದಲ್ಲಿಯೇ ಕ್ರಾಂತಿ ಆರಂಭಿಸಿದ್ದರೂ ಇದುವರೆಗೆ ಸಾಮಾಜಿಕ ಸಮಾನತೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಮ್ಮ ಸರಕಾರವು ಸಾಮಾಜಿಕ ಸಮಾನತೆಯ ತತ್ವದ ಆಧಾರದ ಮೇಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಿತ್ತೂರಿನಲ್ಲಿ ಕಿತ್ತೂರು ಉತ್ಸವ ಮತ್ತು ಚನ್ನಮ್ಮನ ವಿಜಯೋತ್ಸವದ 200 ನೇ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಲಿಷ್ಠ ಬ್ರಿಟೀಷರ ವಿರುದ್ಧ ಹೋರಾಟದ ಕಹಳೆ ಮೊಳಗಿಸಿದ ಚನ್ನಮ್ಮನ ಬಗ್ಗೆ ಯುವಪೀಳಿಗೆಗೆ ತಿಳಿಸಿಕೊಡಲು ಕ್ರಮ ಕೈಗೊಳ್ಳಲಾಗಿದೆ. ರಾಯಣ್ಣ ಮತ್ತು ಬಾಳಪ್ಪನವರು ಚನ್ನಮ್ಮನ ಹೋರಾಟದಲ್ಲಿ ಜತೆಗಿದ್ದವರು. ದೇಶಪ್ರೇಮ ಬೆಳೆಸಲು ಇವರ ಹೋರಾಟ ಸ್ಫೂರ್ತಿಯಾಗಿದೆ. ಜಾತಿಧರ್ಮ ಬದಿಗಿಟ್ಟು ಪ್ರತಿಯೊಬ್ಬರು ಪರಸ್ಪರ ಪ್ರೀತಿಸುವ ಮೂಲಕ ದೇಶಪ್ರೇಮವನ್ನು ಪ್ರದರ್ಶಿಸಬೇಕು. ಕಿತ್ತೂರು ಸಂಸ್ಥಾನದ ಚನ್ನಮ್ಮ ಕಪ್ಪ ಕಾಣಿಕೆ ಏಕೆ ಕೊಡಬೇಕು ಎಂದು ಪ್ರಶ್ನಿಸುವುದರ ಜತೆಗೆ ದತ್ತು ಮಕ್ಕಳಗೆ ಹಕ್ಕಿಲ್ಲ ಎಂಬ ಕಾಯ್ದೆ ವಿರುದ್ಧ ಮೊಟ್ಟಮೊದಲ ಬಾರಿಗೆ ಯುದ್ಧ ಸಾರಿ ಜಯಗಳಿಸಿರುವುದು ಹೆಮ್ಮೆಯ ವಿಷಯ.ವಿಜಯೋತ್ಸವದ 200 ವರ್ಷಾಚರಣೆ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲು ಶಾಸಕ ಬಾಬಾಸಾಹೇಬ್ ಪಾಟೀಲರ ಒತ್ತಾಯದ ಮೇರೆಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಚನ್ನಮ್ಮನವರನ್ನು ವೈಭವೀಕರಿಸಲು ಜಯಂತ್ಯೋತ್ಸವ ಮಾಡುತ್ತಿಲ್ಲ; ಚನ್ನಮ್ಮನ ಐತಿಹಾಸಿಕ ಹೋರಾಟ ಜನರಿಗೆ ತಿಳಿಸಲು ಆಚರಿಸಲಾಗುತ್ತಿದೆ. ಅದೇ ರೀತಿ ಕಿತ್ತೂರು ವಿಜಯೋತ್ಸವದ 200 ನೇ ವರ್ಷಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಹುಟ್ಟುವಾಗ ವಿಶ್ವಮಾನವ ಬೆಳಿತಾ ಬೆಳಿತಾ ಅಲ್ಪಮಾನವರಾಗುತ್ತಾರೆ. ನಾವು ಬೆಳಿತಾ ಬೆಳಿತಾ ವಿಶ್ವಮಾನವರಾಗಬೇಕಿದೆ ಎಂದು ಕುವೆಂಪು ಹೇಳಿದ್ದಾರೆ. ಅದೇ ರೀತಿ ನಾವು ವಿಶ್ವಮಾನವರಾಗಬೇಕಿದೆ. ಅನೇಕರ ತ್ಯಾಗ ಬಲಿದಾನಗಳಿಂದ ನಾವು ಗಳಿಸಿರುವ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಸಮ ಸಮಾಜ ನಿರ್ಮಿಸಬೇಕಿದೆ. ಬಸವಣ್ಣನವರ ಆಶಯದಂತೆ ಜಾತಿ, ಮೌಢ್ಯ, ಕಂದಾಚಾರಗಳನ್ನು ತಿರಸ್ಕರಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶಿವರಾಜ ತಂಗಡಗಿ, ಚನ್ನಮ್ಮಳ ಸ್ವಾಭಿಮಾನಿ ಹೋರಾಟದ ಕುರಿತು ಯುವ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದ ಅವರು, ಕಿತ್ತೂರು ವಸತಿ ಶಾಲೆಗೆ ಇಲಾಖೆಯ ವತಿಯಿಂದ 22 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ, ಚನ್ನಮ್ಮನ ಕೋಟೆಯ ಅಭಿವೃದ್ಧಿಗೆ ಬಹುಹಂತದ ಯೋಜನೆ ರೂಪಿಸಲಾಗಿದ್ದು.ಪ್ರಾಧಿಕಾರಕ್ಕೆ ಪ್ರಸಕ್ತ ವರ್ಷ 50 ಕೋ. ರೂ.ಗಳ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ. ಥೀಮ್ ಪಾರ್ಕ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ನೀರಾವರಿ, ಕೆರೆ ತುಂಬುವ ಯೋಜನೆಗಳು ಚಾಲ್ತಿಯಲ್ಲಿದ್ದು, ಶೀಘ್ರ ಪೂರ್ಣಗೊಳ್ಳಲಿದ್ದು, ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸಲಿದ್ದಾರೆ. ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಸರಕಾರ ಮುಂದಾಗಬೇಕು ಎಂದು ಶಾಸಕ ಬಾಬಾಸಾಹೇಬ್ ಪಾಟೀಲ ಅವರು ಮನವಿ ಮಾಡಿಕೊಂಡರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ, ಸ್ವಾತಂತ್ರ್ಯ ಹೋರಾಟದಲ್ಲಿ ಜನಸಾಮಾನ್ಯರು ಪಾಲ್ಗೊಂಡಿದ್ದಾರೆ. ಆದರೆ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಬರೆಯುವಾಗ ಇಂತಹ ಸಾಮಾನ್ಯ ಜನರು ಮತ್ತು ಮಹಿಳೆಯರನ್ನು ಒಳಗೊಂಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
2022 ರಲ್ಲಿ ಕೇಂದ್ರ ಸರಕಾರವು ಬೆಳಕಿಗೆ ಬಾರದ ಸ್ವಾತಂತ್ರ್ಯ ಹೋರಾಟಗಾರರ ಕುರಿತು 22 ಭಾಷೆಗಳಲ್ಲಿ ಕೃತಿ ರಚಿಸುವ ಯೋಜನೆ ಜಾರಿಗೆ ತಂದರು. ಸಂಶೋಧನೆ ಕೈಗೊಂಡು ಕೃತಿ ರಚಿಸುವ ಜವಾಬ್ದಾರಿಯನ್ನು ಯುವಕರಿಗೆ ನೀಡಿದ್ದರಿಂದ ಉತ್ಕೃಷ್ಟ ಕೃತಿ ರಚನೆ ಸಾಧ್ಯವಾಗಲಿಲ್ಲ. ಮೂರ್ನಾಲ್ಕು ಸಾವಿರ ವರ್ಷಗಳ ಕೃತಿಗಳು, ರಾಮಾಯಣ, ಮಹಾಭಾರತ ತಿಳಿದುಕೊಂಡಿರುವ ಜನರಿಗೆ 200 ವರ್ಷಗಳ ಕಿತ್ತೂರು ಚನ್ನಮ್ಮಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿರವುದು ದುರದೃಷ್ಟಕರ. ದತ್ತಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನು ಮೊದಲ ಅನುಷ್ಠಾನಗೊಂಡಿದ್ದು ಕಿತ್ತೂರಿನಲ್ಲಿ. ಇಂತಹ ಅಮಾನುಷ ಹಾಗೂ ಅನಾಗರಿಕ ಕಾನೂನು ಕಿತ್ತೂರಿನಲ್ಲಿ ಅನುಷ್ಠಾನಗೊಂಡಿರುವುದರಿಂದ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಿಶೇಷ ಸ್ಥಾನವಿದೆ. ಬ್ರಿಟೀಷರ ಮೇಲೆ ಖಡ್ಗ ಎತ್ತಿದ ಮೊದಲ ಮಹಿಳೆ ಕೂಡ ಕಿತ್ತೂರು ಚನ್ನಮ್ಮ ಎಂಬುದು ಅಭಿಮಾನದ ಸಂಗತಿಯಾಗಿದೆ. ರಾಜ್ಯವಾಳಿದವರು ಜನರ ಬಳಿ ಹೋದಾಗ ಲಾವಣಿಗಳು ಹುಟ್ಟುತ್ತವೆ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಜನರ ಬಳಿ ಹೋಗುವುದರಿಂದ ಅವರ ಬಗ್ಗೆ ಜನಮಾನಸದಲ್ಲಿ ಅಭಿಪ್ರಾಯಗಳು ಸೃಷ್ಟಿವಾಗುತ್ತಿವೆ ಎಂದು ಡಾ.ಬಿಳಿಮಲೆ ಅಭಿಪ್ರಾಯಪಟ್ಟರು.
ಕಿತ್ತೂರು ಉತ್ಸವ; ಕಿತ್ತೂರು ಕರ್ನಾಟಕದ ನಾಡಹಬ್ಬವಾಗಲಿ- ಸ್ವಾಮೀಜಿ ಒತ್ತಾಯ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು, ಕಿತ್ತೂರು ಉತ್ಸವವನ್ನು ದಸರಾ ಮಾದರಿಯಲ್ಲಿ ಕಿತ್ತೂರು ಕರ್ನಾಟಕದ ನಾಡಹಬ್ಬವಾಗಿ ಸರಕಾರ ಘೋಷಣೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಚನ್ನಮ್ಮನ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಿದ್ದು, ಸಂತಸಕರವಾಗಿದೆ. ಅಪಶಕುನಗಳ ಕುತ್ಸಿತ ಕಟ್ಟುಕಥೆಗಳ ಮಧ್ಯೆಯೂ ಆಗಮಿಸುವ ಮೂಲಕ ಸಿದ್ಧರಾಮಯ್ಯನವರು ಚನ್ನಮ್ಮನವರಲ್ಲಿದ್ದ ಧೈರ್ಯ, ಸಾಹಸವನ್ನು ಪ್ರದರ್ಶಿಸಿದ್ದಾರೆ. ಸಂಗೊಳ್ಳಿ ರಾಯಣ್ಣನ ಸಂಗೊಳ್ಳಿ ಮತ್ತು ನಂದಗಡದ ಮಾದರಿಯಲ್ಲಿ ಚನ್ನಮ್ಮನ ಕಿತ್ತೂರು ಅಭಿವೃದ್ಧಿಪಡಿಸಬೇಕು. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕಿತ್ತೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಬೇಕು. ಝಾನ್ಸಿ ರಾಣಿ ಕ್ಷೇತ್ರ ರಾಷ್ಟ್ರೀಯ ಸ್ಮಾರಕವಾಗಿದೆ ಅದೇ ರೀತಿ ಚನ್ನಮ್ಮನ ಸಮಾಧಿ ಸ್ಥಳವಿರುವ ಬೈಲಹೊಂಗಲನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಲು ಕ್ರಮ ವಹಿಸಬೇಕು. ಚನ್ನಮ್ಮ ಮತ್ತು ರಾಯಣ್ಣನ ಖಡ್ಗವನ್ನು ಭಾರತಕ್ಕೆ ತರಲು ಸರಕಾರವು ಪ್ರಯತ್ನಿಸಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.
ಚನ್ನಮ್ಮನ ಕಿತ್ತೂರಿನ ರಾಜಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಿಕಿ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಕಾದರವಳ್ಳಿ ಸೀಮಿಮಠದ ಡಾ.ಫಾಲಾಕ್ಷ ಶಿವಯೋಗೀಶ್ವರರು ಸಾನಿಧ್ಯ ವಹಿಸಿದ್ದರು. ಕರ್ನಾಟಕ ವಿಧಾನಸಭೆಯ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ, ಶಾಸಕರಾದ ವಿಶ್ವಾಸ್ ವೈದ್ಯ, ಆಸಿಫ್(ರಾಜು) ಸೇಠ್, ಗಣೇಶ ಹುಕ್ಕೇರಿ, ವಿಧಾನಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮತ್ತಿತರರು ಉಪಸ್ಥಿತರಿದ್ದರು.