ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಮಳೆ ಇದುವರೆಗೆ ಬಿಡುವು ಪಡೆದಿಲ್ಲ. ಬೆಳಗಾವಿಯಲ್ಲಿ ಶನಿವಾರ ಮಳೆ ಸ್ವಲ್ಪ ವಿರಾಮ ಪಡೆದುಕೊಂಡಿದೆ. ಆದರೆ, ನಿರಂತರಸುರಿಯುತ್ತಿರುವ ಧಾರಾಕಾರವಾಗಿ ಮಳೆಯಿಂದ ಆಸ್ತಿಪಾಸ್ತಿಗೆ ಅಪಾರ ಹಾನಿಯಾಗಿದೆ.
ಜಿಲ್ಲೆಯಲ್ಲಿ ಹರಿಯುತ್ತಿರುವ ನದಿ-ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

ಘಟಪ್ರಭೆ ತುಂಬಿ ಹರಿಯುತ್ತಿದ್ದು ಈಗ ಮೈತುಂಬಿಕೊಂಡಿದೆ. ಸುಣಧೋಳಿ ಮಠ ಸಂಪೂರ್ಣ ಜಲಾವೃತಗೊಂಡಿದೆ. ಮಟದ ಸ್ವಾಮೀಜಿಗಳು ಎತ್ತರದ ಸ್ಥಳದಲ್ಲಿರುವ ಕೋಣೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಮೂಡಲಗಿ ತಾಲೂಕು ಮಸಗುಪ್ಪಿ ಗ್ರಾಮದ ಮಹಾಲಕ್ಷ್ಮೀ ದೇವಾಲಯ ಶುಕ್ರವಾರ ಸಂಪೂರ್ಣ ನೀರು ತುಂಬಿಕೊಂಡ ದೃಶ್ಯ ಕಂಡು ಬಂತು. ಶುಕ್ರವಾರ ದೇವಿಗೆ ವಿಶೇಷ ಪೂಜಾ ದಿನವಾಗಿದ್ದರಿಂದ ಭಕ್ತರು ತುಸು ದೂರದಲ್ಲೇ ನಿಂತು ಪ್ರಾರ್ಥಿಸಿಕೊಳ್ಳುತ್ತಿರುವ ದೃಶ್ಯ ಕಂಡು ಬಂತು. ನೆರೆಯ ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ.
ಮಹಾಬಲೇಶ್ವರದಲ್ಲಿ 26.7 ಸೆಂಟಿಮೀಟರ್, ನವಜಾದಲ್ಲಿ 17.2 ಸೆಂಟಿ ಮೀ., ರಾಧಾನಗರಿಯಲ್ಲಿ 23.4 ಸೆಂಟಿಮೀಟರ್, ಸಾಂಗ್ಲಿಯಲ್ಲಿ 2.6 ಸೆಂಟಿಮೀಟರ್, ಕೊಲ್ಲಾಪುರದಲ್ಲಿ 10.4 ಸೆಂಟಿಮೀಟರ್ ಮಳೆಯಾಗಿದೆ. 105. 25 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕೊಯ್ನಾ ಜಲಾಶಯದಲ್ಲಿ ಶುಕ್ರವಾರ 81.20 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಆರು ಗೇಟ್ ಗಳ ಮೂಲಕ ನೀರು ಹರಿ ಬಿಡಲಾಗುತ್ತಿದೆ. ರಾಧಾ ನಗರಿ ಜಲಾಶಯದಿಂದ 10,000 ಕ್ಯುಸೆಕ್, ವಾರಣಾ ಜಲಾಶಯದಿಂದ 16,000 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ.

ಖಾನಾಪುರ ತಾಲೂಕಿನಲ್ಲಿ ಹರಿಯುವ ನೀರು ಇದೀಗ ಗರಿಷ್ಠ ಮಟ್ಟಕ್ಕೆ ತಲುಪಿದೆ. ನದಿ ಪಾತ್ರದಲ್ಲಂತೂ ತೀವ್ರ ಗತಿಯಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಶನಿವಾರ ಬೆಳಗ್ಗೆ ಖಾನಾಪುರದ ಮಲಪ್ರಭಾ ನದಿ ತಟದಲ್ಲಿರುವ ಇಸ್ಕಾನ್ ಮಂದಿರ ಸನಿಹ ನೀರು ಬಂದಿದೆ.

ಶನಿವಾರ ಖಾನಾಪುರ ಪಟ್ಟಣದಲ್ಲಿ ಮಳೆಯ ಪ್ರಮಾಣ ತುಸು ಕಡಿಮೆಯಾಗಿ ಬಿಡುವು ಪಡೆದುಕೊಂಡಿತ್ತು. ಆದರೆ, ಜಾಂಬೋಟಿ ಮತ್ತು ಕಣಕುಂಬಿ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗಿದೆ. ಖಾನಾಪುರ ತಾಲೂಕಿನ ಬಹುಭಾಗ ಪಶ್ಚಿಮ ಘಟ್ಟಗಳಿಂದ ಆವೃತವಾಗಿದೆ. ಹೀಗಾಗಿ, ಇಲ್ಲಿ ಮಳೆಗಾಲದ ನಾಲ್ಕು ತಿಂಗಳ ಅವಧಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಅದರಲ್ಲೂ ಈ ವರ್ಷ ವಿಪರೀತ ಪ್ರಮಾಣದಲ್ಲಿ ಮಳೆಯಾಗಿದೆ.

ಬೆಳಗಾವಿ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರದ ಹೆಚ್ಚಿನ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಸೇರಿದಂತೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.