ಬೆಳಗಾವಿ: ದರೋಡೆ, ಅತ್ಯಾಚಾರ ಸೇರಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯನ್ನು ಬಂಧಿಸುತ್ತಿದ್ದಾಗ,
ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದವನಿಗೆ ಪಿಎಸ್ಐ ಪ್ರವೀಣ ಗಂಗೋಳ ಗುಂಡೇಟು ನೀಡಿದ್ದಾರೆ.
ಚನ್ನಮ್ಮನ ಕಿತ್ತೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಬದಿಗಿರುವ ನಿಚ್ಚಣಕಿ ಬಂಗ್ಲೆ ಬಳಿ ಶನಿವಾರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ.
ಆರೋಪಿ ಬಳಸಿದ ಬೈಕ್ ಸ್ಥಳದಲ್ಲೇ ಬಿದ್ದುಕೊಂಡಿದೆ.
‘ಆರೋಪಿ ರಮೇಶ ಕಿಲಾರಿ ಎಂಬಾತನು ಪೊಲೀಸ್ ಕಾನ್‌ಸ್ಟೆಬಲ್ ಷರೀಫ್ ದಫೇದಾರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ. ಆತನಿಗೆ ಎಚ್ಚರಿಕೆ ನೀಡಲು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಆದರೆ,‌ ಆರೋಪಿ ಅಲ್ಲಿದ್ದ ಇತರೆ ಪೊಲೀಸರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದಾಗ,
ಸ್ವಯಂ ರಕ್ಷಣೆಗಾಗಿ, ಸಬ್‌ ಇನ್ ಸ್ಪೆಕ್ಟರ್ ಪ್ರವೀಣ ಆರೋಪಿ ಕಾಲಿಗೆ ಗುಂಡು ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಆರೋಪಿ ಮತ್ತು ಪಿಎಸ್ಐ ಸೇರಿ ಮೂವರು ಸಿಬ್ಬಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಸುದ್ದಿಗಾರರಿಗೆ ತಿಳಿಸಿದರು.
‘ಆರೋಪಿ ಮೇಲೆ ನಾಲ್ಕು ಡಕಾಯಿತಿ, ತಲಾ ಒಂದು ದರೋಡೆ, ಸಾಮೂಹಿಕ ಅತ್ಯಾಚಾರ, ಶಸ್ತ್ರಾಸ್ತ್ರ ಪ್ರಕರಣ ಮತ್ತು ಇತರೆ‌ ಮೂರು ಪ್ರಕರಣಗಳಿವೆ’ ಎಂದರು.