ಬೆಳಗಾವಿ,: “ಸಹಕಾರಿಯು ಸಾರ್ವಜನಿಕರ ಆಂದೋಲನವಾಗಿದೆ. ಕೃಷಿ ಪತ್ತಿನ ಸಹಕಾರಿ ಸಂಘಗಳು ಗ್ರಾಮೀಣ ಭಾಗದ ರೈತರ ಸಂಕಷ್ಟ ಕಾಲದಲ್ಲಿ ಕೈ ಹಿಡಿದಿವೆ. ಪತ್ತಿನ ಸಹಕಾರಿ ವ್ಯವಸ್ಥೆ ಇಲ್ಲದೆ ಹೋದರೆ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ರೈತರಿಗೆ ಆರ್ಥಿಕ ಊರುಗೋಲಾಗಿ ಸಹಕಾರಿ ಕ್ಷೇತ್ರ ಕಾರ್ಯ ನಿರ್ವಹಿಸುತ್ತಿದೆ” ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರಿಂದಿಲ್ಲಿ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಇತರೆ ಸಹಯೋಗದಲ್ಲಿ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಹಕಾರ ಸಂಘಗಳು ಸಾಲ ನೀಡದೆ ಹೋದರೆ ರಾಜ್ಯದ ಸಕ್ಕರೆ ಕಾರ್ಖಾನೆಗಳು ಆರ್ಥಿಕವಾಗಿ ಹಿಂದುಳಿಯುತಿದ್ದವು. ರಾಜ್ಯದ ಕಾರ್ಖಾನೆಗಳಿಗೆ ಬೆಂಬಲವಾಗಿ ನಿಂತಿದೆ. ಈಗಾಗಲೇ ರಾಜ್ಯದಲ್ಲಿ ಸಹಕಾರ ಕ್ಷೇತ್ರ ಪ್ರಗತಿಯತ್ತ ಸಾಗುತ್ತಿದ್ದು, ಇನ್ನಷ್ಟು ಅಭಿವೃದ್ಧಿಪಡಿಸುವ ಜವಾಬ್ದಾರಿ ನಮ್ಮಮೇಲಿದೆ. ಹಾಗಾಗಿ ಪ್ರಾಮಾಣಿಕವಾಗಿ ಜನಪರ ಸಹಕಾರ ಕ್ಷೇತ್ರವಾಗಿ ದೇಶದಲ್ಲೇ ಆರ್ಥಿಕವಾಗಿ ಮುಂಚೂಣಿಗೆ ಬರಲಿದೆ ಎಂದು ಹೇಳಿದರು.
ರೈತರ ಉತ್ಪಾದಿತ ವಸ್ತುಗಳಿಗೆ ಬೆಲೆ ನಿಗದಿಯಾಗಬೇಕು ಇದರಿಂದ ರೈತರ ಆರ್ಥಿಕತೆಗೆ ಶಕ್ತಿ ಬರಲಿದೆ. “ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ” ಎಂಬ ಧ್ಯೇಯವಾಕ್ಯದೊಂದಿಗೆ ಸಹಕಾರ ಕ್ಷೇತ್ರ ಬಂದಿದೆ ಎಂದರು.
ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ಬೆಳಗಾವಿ ಸಹಕಾರ ರಂಗದ ತವರು ಜಿಲ್ಲೆ. ಅತೀ ಹೆಚ್ಚು ಸಹಕಾರ ಸಂಘಗಳನ್ನು ಜಿಲ್ಲೆ ಹೊಂದಿದ್ದು,
ರೈತರಿಗೆ, ಪ.ಜಾ. ಪಂಗಡದವರಿಗೆ ವಿವಿಧ ಯೋಜನೆಗಳನ್ನು ಸಂಘಗಳು ತಲುಪಿಸುತ್ತಿವೆ.
ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ರೂ.ಗಳವರೆಗೆ ಸಾಲ ನೀಡಲಾಗುತ್ತಿದೆ ಎಂದು ಹೇಳಿದರು.
ಸಹಕಾರ ಚಳುವಳಿ ಗದಗ ಜಿಲ್ಲೆಯಿಂದ ಪ್ರಾರಂಭವಾಗಿ ಪ್ರಸ್ತುತ ದಿನಮಾನಗಳಲ್ಲಿ ಸಹಕಾರ ರಂಗ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಹುಕ್ಕೇರಿಯಲ್ಲಿ ಸಹಕಾರಿ ಶಾಲೆ ದೇಶದಲ್ಲೇ ಮಾದರಿಯಾಗಿದೆ.
ಸಹಕಾರ ರಂಗದಲ್ಲಿ ಸದಸ್ಯರ ಆಯ್ಕೆಯ ಮಾನದಂಡ ಬದಲಾಗಬೇಕಿದೆ. ಇನ್ನಷ್ಟು ಸುಲಭ ಮಾರ್ಗದಲ್ಲಿ ಸಹಕಾರ ಸಂಘಗಳ ಸದಸ್ಯರ ಆಯ್ಕೆ ನಿಯಮಗಳನ್ನು ರೂಪಿಸಬೇಕು. ಜಮೀನು ಪಹಣಿ ಹೊಂದಿದ ರೈತರಿಗೆ ಸದಸ್ಯತ್ವ ದೊರೆಯುವ ನಿಟ್ಟಿನಲ್ಲಿ ಡಿಜಿಟಲ್ ಮೂಲಕ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಸಬೇಕು ಎಂದು ಅವರು ಹೇಳಿದರು.
ರೈತರಿಗೆ ಸುಲಭವಾಗಿ ಹೆಚ್ಚು ಸಾಲ ಸೌಲಭ್ಯ ನೀಡಲು ಸರಳೀಕರಣ ಮಾದರಿಯನ್ನು ಅನುಸರಿಸಬೇಕು. ಈ ಪ್ರಕ್ರಿಯೆಯನ್ನು ಎಲ್ಲಾ ಸಹಕಾರಿ ಸಂಘಗಳು ನಿಯಮಾನುಸಾರ ಕಾನೂನು ಚೌಕಟ್ಟಿನಲ್ಲಿ ಜಾರಿಗೆ ತರಬೇಕು ಎಂದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಉತ್ತರ ಕರ್ನಾಟಕದ ಭಾಗದ ಜನರು ಸಹಕಾರ ಸಂಘದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ತಾರತಮ್ಯ ಇಲ್ಲದೇ ನಿಷ್ಠಾವಂತ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರಿ ಚಳುವಳಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಿದೆ ಎಂದರು.
ಸಹಕಾರಿ ಸಂಘಗಳಿಂದ ದೇಶದ ಆರ್ಥಿಕತೆಗೆ ಬಹಳಷ್ಟು ಬಲ ಬಂದಿದೆ. ರಾಜ್ಯದಲ್ಲಿ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಅದೇ ರೀತಿಯಲ್ಲಿ ಜಿಲ್ಲೆಯಲ್ಲಿ ಮಹಾ ವಿದ್ಯಾಲಯವಾಗಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಮಾತನಾಡಿ, ಸಹಕಾರ ಕ್ಷೇತ್ರವಿಲ್ಲದೆ ರಾಜ್ಯ, ದೇಶ ರೈತರ ಪ್ರಗತಿ ಸಾಧ್ಯವಿಲ್ಲ. ಗದಗ ಜಿಲ್ಲೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ರೈತರಿಗೆ ಅನುಕೂಲವಾಗಲು ಸಹಕಾರ ಕ್ಷೇತ್ರ ಪ್ರಾರಂಭವಾಯಿತು. ಸಾಲದ ನೆರವು ನೀಡದೆ ಹೋದರೆ ರೈತಾಪಿ ವರ್ಗಕ್ಕೆ ಆರ್ಥಿಕ ಕಷ್ಟವಾಗುತ್ತಿತ್ತು.
ಹಾಲು ಮಾರಾಟ, ನೇಕಾರ, ರೈತರು, ಸೌಹಾರ್ದ, ಮಹಿಳಾ ಸೊಸೈಟಿ ಸೇರಿದಂತೆ ಎಲ್ಲ ವರ್ಗದಲ್ಲಿ ಸಹಕಾರ ಕ್ಷೇತ್ರ ಬೆಳೆದು ನಿಂತಿದೆ. ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅದೇ ರೀತಿಯಲ್ಲಿ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಬೇಕು. ಸಹಕಾರ ಸಂಘಗಳು ಜನರ ವಿಶ್ವಾಸ ಉಳಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಸಹಕಾರ ಕ್ಷೇತ್ರದ ಬೆಳವಣಿಗೆಗೆ ವರದಿಯನ್ನು ಸಹಕಾರ ಸಪ್ತಾಹ ಮೂಲಕ ಆಚರಣೆ ಮಾಡಲಾಗುವುದು. ಬೆಳಗಾವಿ ಜಿಲ್ಲೆ ಕಬ್ಬು ಬೆಳೆಯುವಲ್ಲಿ ಮುಂಚೂಣಿಯಲ್ಲಿದೆ. ಬಾಗಲಕೋಟೆ, ಬಿಜಾಪುರ, ತುಮಕೂರು ಸೇರಿದಂತೆ ರಾಜ್ಯದಲ್ಲೇ ಸಹಕಾರ ಕ್ಷೇತ್ರ ಬೆಳೆದು ಹೆಮ್ಮರವಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 8 ರಿಂದ 9 ಸಾವಿರ ಕೋಟಿ ಜಿ.ಎಸ್.ಟಿ ಸಂದಾಯ ಮಾಡಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರದ ಹೊಸ ಯೋಜನೆಯಾದ ಕಬ್ಬಿನಿಂದ ಎಥನಾಲ್ ಉತ್ಪಾದನೆ ಯೋಜನೆಗೆ ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸಲಿದೆ. ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕತೆಗೆ ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಹೇಳಿದರು.
ಸರ್ಕಾರದ ಮುಖ್ಯ ಸಚೇತಕರಾದ ಅಶೋಕ ಪಟ್ಟಣ, ಶಾಸಕರಾದ ಆಸೀಫ್ (ರಾಜು) ಸೇಠ, ದುರ್ಯೋಧನ ಐಹೊಳೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮಹಾಂತೇಶ ಕವಟಗಿಮಠ, ಜಗದೀಶ ಕವಟಗಿಮಠ,
ಜಿ. ಪಂ. ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಪಾಲ್ಗೊಂಡಿದ್ದರು.