ಬೆಳಗಾವಿ: ಗೋಕಾಕ ಮಹಾಲಕ್ಷ್ಮಿ ಜಾತ್ರೆಯಲ್ಲಿ ಶನಿವಾರ ಶಾಸಕ ರಮೇಶ ಜಾರಕಿಹೊಳಿ ಅವರ ಪುತ್ರ ಸಂತೋಷ, ಜನಸಂದಣಿಯ ಮಧ್ಯೆಯೇ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ.
ದಶಕದ ಬಳಿಕ ಗೋಕಾಕದಲ್ಲಿ ಅದ್ದೂರಿ ಜಾತ್ರೆ ನಡೆಯುತ್ತಿದ್ದು, ಜಾರಕಿಹೊಳಿ ಕುಟುಂಬದವರೇ ಮುಂದಾಳತ್ವ ವಹಿಸಿದ್ದಾರೆ. ಉತ್ಸವದ ಆರನೇ ದಿನವಾದ ಶನಿವಾರ ಸಂತೋಷ ಜಾರಕಿಹೊಳಿ ಭಂಡಾರದ ಓಕುಳಿಯಲ್ಲಿ ಪಾಲ್ಗೊಂಡರು. ಈ ವೇಳೆ ಬಂದೂಕು ಹಿಡಿದುಕೊಂಡು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದರು. ಸುತ್ತ ಸೇರಿದ್ದ ಅವರ ಬೆಂಬಲಿಗರೆಲ್ಲ ಮಹಾಲಕ್ಷ್ಮೀಗೆ ಜೈ ಎಂದು ಕೂಗಾಡಿ, ಕುಣಿದಾಡಿ ಸಂಭ್ರಮಿಸಿದರು. ಇದರ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ‘ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರ ಪ್ರದರ್ಶನ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದ ಅಪರಾಧ ಆಧರಿಸಿ ಪ್ರಕರಣ ದಾಖಲಿಸಲಾಗಿದೆ ಎಂದರು.
ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ ಜಾರಕಿಹೊಳಿ ಪುತ್ರ
