ಬೆಳಗಾವಿ : ಬೆಳಗಾವಿ ಬಿಜೆಪಿಯ ಭದ್ರಕೋಟೆಯಾಗಿ ಕಳೆದ ಎರಡು ದಶಕಗಳಿಂದ ಹೊರಹೊಮ್ಮಿದೆ. ಆದರೆ ಇದೇ ಮೊದಲ ಬಾರಿಗೆ ಬಿಜೆಪಿ ಪಾಲಿಗೆ ಬೆಳಗಾವಿಯಲ್ಲಿ ಗೆಲುವು ಹರಸಾಹಸವಾಗಿ ಪರಿಣಮಿಸಲಿದೆ. ಏಕೆಂದರೆ ಸ್ಥಳೀಯ ನಾಯಕರ ಹಾಗೂ ಬಿಜೆಪಿ ಕಟ್ಟಾ ಮತದಾರರ ವಿರೋಧದ ನಡುವೆಯೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ. ಆದ್ದರಿಂದಲೇ ಶೇಟ್ಟರ ( ಬಿಜೆಪಿ) ಗೆಲವು ಸರಳವಾಗಿಲ್ಲ. ಇಲ್ಲಿ ಏನಿದ್ದರೂ ಸ್ಥಳೀಯರಿಗೆ ಅಥವಾ ಶೆಟ್ಟರ ಹೊರತುಪಡಿಸಿ ಯಾರಿಗಾದರೂ ಅವಕಾಶ ನೀಡಿದ್ದರೆ ಧನಾತ್ಮಕವಾದ ಫಲಿತಾಂಶ ಬರಬಹುದು.
ಬೆಳಗಾವಿ ಬಿಜೆಪಿ ಪಾಲಿಗೆ ಭದ್ರ ಕೋಟೆಯಾಗಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಛಿದ್ರಗೊಂಡಿತು. ಹೀಗಾಗಿ ಈ ಬಾರಿ ಬಿಜೆಪಿ ಪಾಲಿಗೆ ಬೆಳಗಾವಿ ಗೆಲುವು ಕಗ್ಗಂಟಾಗಿದೆ. ಅದರಲ್ಲೂ ಸ್ಥಳೀಯ ಬಿಜೆಪಿಗರು ಜಗದೀಶ್ ಶೆಟ್ಟರ್ ಅವರ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಆದರೆ ಹೈಕಮಾಂಡ್ ಇದೆಲ್ಲವನ್ನು ಬದಿಗಿಟ್ಟು ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿಯಲ್ಲಿ ಟಿಕೆಟ್ ನೀಡಿರುವುದು ಜೂನ್ 4 ರ ಕುತೂಹಲ ಹೆಚ್ಚಾಗಿದೆ. ಚುನಾವಣೆಯಲ್ಲಿ ಬೆಳಗಾವಿ ಬಿಜೆಪಿ ನಾಯಕರು ಜಗದೀಶ್ ಶೆಟ್ಟರ್ ಅವರ ಗೆಲುವಿಗೆ ಟೊಂಕ ಕಟ್ಟಿ ನಿಲ್ಲುತ್ತಾರಾ ಎಂಬ ದೊಡ್ಡ ಪ್ರಶ್ನೆ ಇದೀಗ ಜನರಲ್ಲಿ ಮೂಡಿದೆ.
ಜಗದೀಶ್ ಶೆಟ್ಟರ್ ಅವರಿಗೆ ಈ ಬಾರಿ ಗೆಲುವು ಬಹುದೊಡ್ಡ ಕಠಿಣ ಸವಾಲಾಗಿದ್ದು ಇದನ್ನು ಯಾವ ರೀತಿ ನಿಭಾಯಿಸುತ್ತಾರೆ. ಎಂಬ ಕುತೂಹಲ ಮೂಡಿದೆ. ಸೋಮವಾರದಿಂದಲೇ ಬೆಳಗಾವಿಯ ರಣಕಣ ಕಾವೇರಲಿದ್ದು ಜಗದೀಶ್ ಶೆಟ್ಟರ್ ಅವರಿಗೆ ಕೊನೆಗೂ ಟಿಕೆಟ್ ಸಿಕ್ಕಿರುವುದರಿಂದ ಕಮಲ ಪಾಳಯ ಬಿರುಸಿನ ಚುನಾವಣಾ ಪ್ರಚಾರ ನಡೆಸುವುದು ಖಚಿತವಾಗಿದೆ.
ಗೋ ಬ್ಯಾಕ್‌ ಶೆಟ್ಟರ್‌’ ಅಭಿಯಾನದ ನಡುವೆಯೂ ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಅವರನ್ನು ಕಣಕ್ಕಿಳಿಸಲಾಗಿದೆ. ಶೆಟ್ಟರ್ ಅವರಿಗೆ ಟಿಕೆಟ್‌ ನೀಡುವುದಕ್ಕೆ ಜಿಲ್ಲೆಯ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಿದ ಕಾರಣಕ್ಕೆ ಶೆಟ್ಟರ್ ಬಿಜೆಪಿ ತ್ಯಜಿಸಿದ್ದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದು 35 ಸಾವಿರ ಮತಗಳ ಅಂತರದಿಂದ ಸೋತಿದ್ದರು.