ಸಂಕೇಶ್ವರ : ಯುವ ನ್ಯಾಯವಾದಿ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನಿಸಿರುವ ಘಟನೆ ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ನಡೆದಿದ್ದು, ಹಲ್ಲೆಗೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸದ್ಯ ಸಂಕೇಶ್ವರದ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಗರ ಮಾನೆ ಹಲ್ಲೆಗೆ ಒಳಗಾಗಿರುವ ನ್ಯಾಯವಾದಿ ಆಗಿದ್ದಾರೆ. ಇವರು ಕಳೆದ ದಿ. 11 ರಂದು ತಮ್ಮ ಸ್ವಗ್ರಾಮವಾದ ಸೊಲ್ಲಾಪುರ ಗ್ರಾಮದ ಗೇಟ್ ಹತ್ತಿರ ಸುಮಾರು 10 ಜನರು ಸೇರಿ ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವ ಬಗ್ಗೆ ಸಂಕೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.
ಒಂದು ಕಡೆಯ ಗುಂಪಿನ ಕಕ್ಷಿದಾರನಿಗೆ ಬೆಂಬಲ ನೀಡುತ್ತಿದ್ದಾರೆ ಎನ್ನುವ ಕಾರಣದ ಹಿನ್ನೆಲೆಯಲ್ಲಿ ಈ ಹಲ್ಲೆಯನ್ನು ಮಾಡಲಾಗಿದೆ ಎಂದು ಪೊಲೀಸರಿಗೆ ನೀಡಲಾಗಿರುವ ದೂರಿನಲ್ಲಿ ವಿವರಿಸಲಾಗಿದೆ.
ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಸಂಕೇಶ್ವರ ಪೊಲೀಸರು ‌ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಇನ್ನುಳಿದವರು ಪತ್ತೆಗಾಗಿ ಶೋಧ ನಡೆಸಿದ್ದಾರೆ.

ಪ್ರತಿಭಟನೆ :

ಯುವ ನ್ಯಾಯವಾದಿ ಹಲ್ಲೆ ಮಾಡಿರುವವರ ಬಂಧನಕ್ಕೆ ವಿಳಂಬ ನೀತಿ ಹಾಗೂ ಇನ್ನುಳಿದ ಹಲ್ಲೆಕೋರರ ಬಂಧನಕ್ಕೆ ಒತ್ತಾಯಿಸಿ ಸಂಕೇಶ್ವರದ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸಂಕೇಶ್ವರದ ನ್ಯಾಯವಾದಿಗಳು ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಮಂಗಳ ವಾರ ಮಧ್ಯಾಹ್ನ 11 ಗಂಟೆ ಸುಮಾರಿಗೆ ನ್ಯಾಯಾಲಯದ ಕಾರ್ಯ ಕಲಾಪವನ್ನು ಬಹಿಷ್ಕಾರ ಮಾಡಿದ ಸಂಕೇಶ್ವರದ ನ್ಯಾಯವಾದಿ ಗಳು ನೇರವಾಗಿ ಸಂಕೇಶ್ವರ ಪೊಲೀಸ್ ಠಾಣೆಗೆ ಆಗಮಿಸಿ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.
ಅಲ್ಲದೆ ಪೊಲೀಸರ ವಿರುದ್ದ ಧಿಕ್ಕಾರದ ಘೋಷಣೆ ಕೂಗಿದರು. ಇನ್ನುಳಿದ ಹಲ್ಲೆಕೋರರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.