ಬೆಳಗಾವಿ :ಬೆಳಗಾವಿ ತಾಲೂಕಿನಲ್ಲಿ ಶನಿವಾರ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸುವಲ್ಲಿ ಅಬಕಾರಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 3.5 ಲಕ್ಷ ಮೌಲ್ಯದ ಮದ್ಯ ಹಾಗೂ 5 ಲಕ್ಷ ಮೌಲ್ಯದ ವಾಹನ, ಮೊಬೈಲ್ ಸೇರಿದಂತೆ ಒಟ್ಟು 9.5 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆ ವಿವರ : ದಿನಾಂಕ:02-12-2023 ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದಿಂದ ಕವಳೆವಾಡಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಬಿಜಗರ್ಣಿ ಗ್ರಾಮದಿಂದ ಕವಳೆವಾಡಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ನಾಲ್ಕು ಚಕ್ರ ಗೂಡ್ಸ್ ವಾಹನ ಸಂಖ್ಯೆ ಕೆಎ-22 ಸಿ- 9398 ವಾಹನವನ್ನು ತಪಾಸಣೆ ಮಾಡಿದಾಗ ವಾಹನದ ಹಿಂದುಗಡೆ ಪಾರ್ಟಿಷನ್ ಮಾಡಿ ಬಚ್ಚಿಟ್ಟು 09 ವಿವಿಧ ನಮೂನೆಯ ಗೋವಾದ ಸುಮಾರು 760 ಬಾಟಲಿಗಳಲ್ಲಿ ಒಟ್ಟು 239.400.ಲೀ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವದು ಪತ್ತೆಯಾಗಿರುತ್ತದೆ.
ವಾಹನ ಚಾಲಕ ಬೆಳಗಾವಿ ತಾಲೂಕಿನಬಹದ್ದೂರವಾಡಿ ನಾಗೇಶ ನಾರಾಯಣ ಪಾಟೀಲ (34) ಹಾಗೂ ಸಾಹಿಲ್ ಲಕ್ಷ್ಮಣ ಪಾಟೀಲ (19) ಇವರನ್ನು ಬಂಧಿಸಲಾಗಿದೆ.
ಬಿಳಿ ಬಣ್ಣದ ಅಶೋಕ ಲೆಲ್ಯಾಂಡ್ ಕಂಪನಿಯ ನಾಲ್ಕು ಚಕ್ರ ಗೂಡ್ಸ್ ವಾಹನ ಸಂಖ್ಯೆ ಕೆಎ-22 ಸಿ-9398 ವಾಹನದ ಮಾಲೀಕನನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ.
ಅಬಕಾರಿ ಆಯುಕ್ತರಾದ ಡಾ:ವೈ ಮಂಜುನಾಥ, ಜಂಟಿ ಆಯುಕ್ತ ಫಿರೋಜಖಾನ ಕಿಲ್ಲೇದಾರ, ಉಪಾಯುಕ್ತರಾದ ವನಜಾಕ್ಷಿ ಎಂ. ವಿಜಯಕುಮಾರ ಹಿರೇಮಠ ಇವರ ಮಾರ್ಗದರ್ಶನದಲ್ಲಿ ಉಪಾಧೀಕ್ಷಕರಾದ ರವಿ ಮುರಗೋಡ ಅವರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. ದಾಳಿಯಲ್ಲಿ ಮಂಜುನಾಥ ಗಲಗಲಿ, ಸುನೀಲ ಪಾಟೀಲ, ಮಹಾದೇವಪ್ಪ ಕಟಗೆನ್ನವರ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
