ಬೆಳಗಾವಿ : ಮಹಾನಗರ ಪಾಲಿಕೆ ಸೂಪರ್ ಸೀಡಗೂ ಬಿಜೆಪಿ ಸದಸ್ಯ ಅಭಿಜಿತ್ ಜವಳ್ಕರ್ ಹಾಗೂ ರಮೇಶ ಪಾಟೀಲ ಅವರ ನಡುವೆ ನಡೆದಿರುವ ಹೊಡೆದಾಟಕ್ಕೂ ಏನು ಸಂಬಂಧ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಖಾತೆ ಸಚಿವ ಸತೀಶ ಜಾರಕಿಹೊಳಿ ಅವರಿಂದಿಲ್ಲಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾನಗರ ಪಾಲಿಕೆ ಬಡಿದಾಟ ಪ್ರಕರಣ ಅವರವರ ವೈಯಕ್ತಿಕ. ಅದಕ್ಕೂ ಕಾಂಗ್ರೆಸ್ಸಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದ ಅವರು, ಅವರಿಬ್ಬರಿಗೂ ಹೊಡೆದಾಟ ಮಾಡಲು ನಾವು ಹೇಳಿದ್ದೇವಾ ? ಎರಡು ಕಡೆಯವರು ಹೊಡೆದಾಟ ನಡೆಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯವರು ತಮ್ಮ ಮೇಲೆ ಬರುವ ಆರೋಪವನ್ನು ಬೇರೆಯವರ ಮೇಲೆ ಹಾಕುವ ಪ್ರಯತ್ನ ಮಾಡುತ್ತಾರೆ. ಪೊಲೀಸರು ನೀಡುವ ವರದಿ ಮೇರೆಗೆ ನ್ಯಾಯಾಲಯ ಅಂತಿಮವಾಗಿ ಕ್ರಮ ಕೈಗೊಳ್ಳಲಿದೆ. ಈ ಪ್ರಕರಣವನ್ನು ಇಡೀ ಬೆಳಗಾವಿಗೆ ಹಬ್ಬಿಸುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.
ಗೋವಾವೆಸ್ ತಿನಿಸು ಕಟ್ಟೆ ಅಂಗಡಿಗಳ ಟೆಂಡರನ್ನು ರಾಜ್ಯಮಟ್ಟದ ಎರಡು ಪತ್ರಿಕೆಗಳಲ್ಲಿ ನೀಡಬೇಕಾಗಿತ್ತು. ಆದರೆ, ಗಾಳಿ ಗೋಪುರ ಎಂಬ ಪ್ರಚಾರವಿಲ್ಲದ ಪತ್ರಿಕೆಯಲ್ಲಿ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರಾಗಿರುವ 54 ಜನರಿಗೆ ಅಂಗಡಿಗಳನ್ನು ಕೇವಲ ತಿಂಗಳಿಗೆ ಕೇವಲ 4 ಸಾವಿರ ರೂ. ಗಳ ಬಾಡಿಗೆಗೆ ನೀಡಿದ್ದಾರೆ. ಆದರೆ ಕನಿಷ್ಠಪಕ್ಷ ಅದು ₹ 20 ಸಾವಿರ ಬಾಡಿಗೆಗೆ ಹೋಗುತ್ತದೆ. ಆರ್ಥಿಕವಾಗಿ ದುರ್ಬಲರಿಗೆ ನೀಡಬೇಕು ಎಂಬ ನಿಯಮವಿದ್ದರೂ ಅವುಗಳನ್ನು ಗಾಳಿಗೆ ತೂರಿ ಒಂದು ಕೋಟಿ ರೂಪಾಯಿ ವಾಹನ ಹಾಗೂ ಬಂಗಾರದ ಅಂಗಡಿ ಹೊಂದಿರುವವರಿಗೆ 30 ವರ್ಷಗಳವರೆಗೆ ನೀಡಲಾಗಿದೆ. ಅಂಗಡಿಗಳ ಟೆಂಡರ್ ಸರಿಯಾಗಿ ಆಗಿಲ್ಲ. ಅದನ್ನು ಮತ್ತೊಮ್ಮೆ ಟೆಂಡರ್ ಕರೆಯಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದರು.
ಲೋಕಸಭಾ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು ಅಂತಿಮವಾಗಿ ಮೂವರು ಆಕಾಂಕ್ಷಿಗಳ ಹೆಸರನ್ನು ಪಕ್ಷಕ್ಕೆ ಅಧಿವೇಶನ ಸಂದರ್ಭದಲ್ಲಿ, ನೀಡುತ್ತೇವೆ. ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳಿಂದ ಎರಡು ಲಕ್ಷ ರೂಪಾಯಿ ಪಡೆಯಲಾಗಿತ್ತು. ಆದರೆ, ಈಗ ಗ್ಯಾರಂಟಿ ಬಂದ ನಂತರ ಲೋಕಸಭಾ ಟಿಕೆಟ್ ಸಹಾ ಫ್ರಿ ಎಂದು ನಗುತ್ತಾ ಉತ್ತರ ನೀಡಿದರು.