ಬೆಳಗಾವಿ, ಅ.7: ಸಕ್ಕರೆ ಕಾರ್ಖಾನೆಗಳು ನ. 1 ರ ನಂತರವೇ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಬೇಕು. ಸರ್ಕಾರದ ಆದೇಶವನ್ನು ಎಲ್ಲ 27 ಕಾರ್ಖಾನೆಯವರು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಾರ್ಖಾನೆಗಳಿಗೆ ಸೂಚನೆ ನೀಡಿದರು.

2023-24 ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸುವ ಕುರಿತು ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ನಡೆದ ಸಕ್ಕರೆ ಕಾರ್ಖಾನೆಗಳ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರುಗಳ/ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಫ್ ಆರ್ ಪಿ ದರದಲ್ಲಿ ರೈತರಿಗೆ ನೀಡುವ ಮೊತ್ತ ಹಾಗೂ H&T ಮೊತ್ತ ಕಾರ್ಖಾನೆ ನೋಟಿಸ್ ಬೋರ್ಡ್ ಗೆ ಅಂಟಿಸಬೇಕು. ಈ ಬಗ್ಗೆ ಕಬ್ಬು ಪೂರೈಕೆದಾರ ರೈತರಿಗೆ ಮಾಹಿತಿ ನೀಡಬೇಕು. ಕಬ್ಬಿನ ತೂಕದ ಮಷಿನ್ ದಲ್ಲಿ ಕಡ್ಡಾಯವಾಗಿ ಪಾರದರ್ಶಕ ವ್ಯವಸ್ಥೆ ಅನುಷ್ಠಾನ ಮಾಡಬೇಕು. ರಿಕವರಿ ಸ್ಯಾಂಪಲ್ ಮಷಿನ್ ಅಳವಡಿಸಿ ರೈತರಿಗೆ ಅನ್ಯಾಯ ಆಗದಂತೆ ಕ್ರಮವಹಿಸಬೇಕು ಎಂದು ಹೇಳಿದರು.

ಅನೀರಿಕ್ಷಿತ ಭೇಟಿ-ತೂಕ ಪರಿಶೀಲನೆ: ಅನಿರೀಕ್ಷಿತವಾಗಿ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲು ಜಿಲ್ಲಾ ಮಟ್ಟದಲ್ಲಿ ತಂಡ ರಚನೆ ಮಾಡುವುದರ ಜತೆಗೆ ತೂಕ ಹಾಗೂ ರಿಕವರಿ ಪರಿಶೀಲನೆ ಮಾಡಲಾಗುವುದು. ರೈತ ಮುಖಂಡರ ಜೊತೆ ಚರ್ಚಿಸಿ ದರ ಘೋಷಣೆ ಮಾಡಿ ಸರ್ಕಾರದ FRP ಪ್ರಕಾರ ನಿಗದಿತ ಸಮಯದಲ್ಲಿ ಪಾವತಿ ಮಾಡಬೇಕು. ಶುಗರ್ ಕಂಟ್ರೋಲ್ ಆದೇಶಗಳನ್ನು ಕಡ್ಡಾಯವಾಗಿ ನಿಯಮಾನುಸಾರ ಪಾಲನೆ ಮಾಡಬೇಕು ಎಂದು ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಿದರು.

ಹೆಚ್ಚುವರಿ ಬೆಲೆ ನಿಗದಿಗೆ ಮನವಿ: ಈ ಬಾರಿ ಬರಗಾಲ ಘೋಷಣೆಯಾಗಿರುವುದರಿಂದ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಕ್ಕರೆ ಕಾರ್ಖಾನೆಗಳು ಎಫ್.ಆರ್.ಪಿ. ದರಕ್ಕಿಂತ ಹೆಚ್ಚುವರಿಯಾಗಿ ದರ ನಿಗದಿಪಡಿಸಬೇಕು ಎಂದು ರೈತರ ಪರವಾಗಿ ಕಾರ್ಖಾನೆಗಳಿಗೆ ಮನವಿ ಮಾಡಿಕೊಂಡರು.

ಪ್ರೊಬೋಷನರಿ ಐ.ಎ.ಎಸ್. ಅಧಿಕಾರಿ ಶುಭಂ ಶುಕ್ಲಾ, ಆಹಾರ, ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಶೈಲ್ ಕಂಕಣವಾಡಿ ಸಹಾಯಕ ನಿಯಂತ್ರಕರು ತೂಕ ಮಾಪನ ಇಲಾಖೆ, ಸಹಕಾರ ಇಲಾಖೆ, ಜಿಲ್ಲಾ ಪರಿಸರ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.