ಬೆಳಗಾವಿ: ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಕಾಂಕ್ರೀಟ್ ಮಿಕ್ಸರ್ ವಾಹನ ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ಇಬ್ಬರು ಪವಾಡಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಳಗಾವಿ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ರಸ್ತೆಯಲ್ಲಿ ನಡೆದಿದೆ.
ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಕ್ರೇನ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಹರಸಾಹಸ ಪಟ್ಟು ಕಾರಿನೊಳಗೆ ಸಿಲುಕಿದ್ದ ಇಬ್ಬರು ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಧಾರವಾಡ ಮೂಲದ ಪರಪ್ಪ ಬಾಳಿಕಾಯಿ, ನಿಂಗಪ್ಪ ಕೊಪ್ಪದ ಗಾಯಗೊಂಡವರು.
ಕಾರಿನಲ್ಲಿ ಧಾರವಾಡದಿಂದ ಬೆಳಗಾವಿಗೆ ಈ ಇಬ್ಬರು ಬರುತ್ತಿದ್ದರು. ಸಂಬಂಧಿಗಳ ಆಗಮನಕ್ಕಾಗಿ ಸರ್ವೀಸ್ ರಸ್ತೆ ಬದಿ ಕಾರು ನಿಲ್ಲಿಸಿ ಕಾಯುತ್ತಿದ್ದರು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾಂಕ್ರೀಟ್ ಮಿಕ್ಸರ್ ವಾಹನ ಕಾರಿನ ಮೇಲೆ ಉರುಳಿ ಬಿದ್ದಿತ್ತು. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಮಾಡಿ ಇಬ್ಬರು ಕಾರಿನೊಳಗಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಸ್ಥಳಕ್ಕೆ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ನಿರಂಜನರಾಜ್ ಅರಸ್ ಎನ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಧಾರವಾಡದಿಂದ ಬೆಳಗಾವಿಯ ಶೂರೂಂಗೆ ತೋರಿಸಲು ಕಾರು ತೆಗೆದುಕೊಂಡು ಇಬ್ಬರು ಬಂದಿದ್ದರು. ಕೆಎಲ್ಇ ರಸ್ತೆಗೆ ಹೋಗುವ ಕ್ರಾಸ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಾರು ನಿಲ್ಲಿಸಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಆ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕ ಯಾರು ಅಂತಾ ಗೊತ್ತಾಗಿದೆ. ಆತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಕಾರಿನ ಮೇಲೆ ಲಾರಿ ಬಿದ್ದು, ಇಬ್ಬರು ಒಳಗೆ ಸಿಲುಕಿರುವ ಕುರಿತು ಮಾಹಿತಿ ಬಂತು. ತಕ್ಷಣವೇ ಸ್ಥಳಕ್ಕೆ ನಾವು ದೌಡಾಯಿಸಿ ಇಬ್ಬರನ್ನು ರಕ್ಷಿಸಿದೇವು. ಕಾರಿನ ಕೆಳ ಭಾಗವನ್ನು ಕೊರೆದು ಇಬ್ಬರನ್ನು ಹೊರ ತೆಗೆದೇವು. ಕಾಂಕ್ರೀಟ್ ಮಿಕ್ಸರ್ ವಾಹನದ ಟಾಯರ್ ಗಳು ಹಳೆಯದಾಗಿದ್ದವು. ಅದೇ ರೀತಿ ಲೋಡ್ ಕೂಡ ಇತ್ತು. ಹಾಗಾಗಿ, ಅಪಘಾತ ಸಂಭವಿಸಿದೆ ಎಂದು ಕ್ರೇನ್ ಸಿಬ್ಬಂದಿ ಅಜಾನ್ ಪಠಾಣ ತಿಳಿಸಿದರು.
ಕಾರಿನ ಮೇಲೆ ಬಿದ್ದ ಕಾಂಕ್ರೀಟ್ ಮಿಕ್ಸರ ಬೃಹತ ಲಾರಿ
