ಬೆಳಗಾವಿ:* ಬೆಂಗಳೂರಿನ ಬಾಲಭವನಕ್ಕಿಂತ ಸುಂದರವಾಗಿ, ವಿಶಿಷ್ಟವಾಗಿ ಬೆಳಗಾವಿ ಬಾಲಭವನ ನಿರ್ಮಿಸಬೇಕೆನ್ನುವುದು ನನ್ನ ಸಂಕಲ್ಪ. 20 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಬಾಲಭವನ ಬೆಳಗಾವಿಯಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರಿಂದಿಲ್ಲಿ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬೆಂಗಳೂರಿನ ಜವಾಹರ ಬಾಲಭವನ ಸೊಸೈಟಿ, ನಿರ್ಮಿತಿ ಕೇಂದ್ರ ಹಾಗೂ ಜಿಲ್ಲಾ ಬಾಲ ಭವನ ಸಮಿತಿ ಸಂಯುಕ್ತ ಆಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಜಿಲ್ಲಾ ಬಾಲ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ, ಮಾತನಾಡಿದ ಅವರು, ಬೆಳಗಾವಿ ಎರಡನೇ ರಾಜಧಾನಿ ಮಟ್ಟಕ್ಕೆ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಇಲ್ಲಿ ಅಭಿವೃದ್ಧಿ ಕೆಲಸಗಳು ಕೂಡ ನಡೆಯಬೇಕು, ಮೂಲಭೂತ ಸೌಲಭ್ಯಗಳು ಕೂಡ ನಿರ್ಮಾಣವಾಗಬೇಕು.
ನಮ್ಮ ಇಲಾಖೆಯಿಂದ ಜಿಲ್ಲೆಗೆ ಅನೇಕ ಯೊಜನೆಗಳನ್ನು ತರಲಾಗುತ್ತಿದೆ. ಇಷ್ಟೊಂದು ದೊಡ್ಡ ಜಿಲ್ಲೆಗೆ ಈವರೆಗೂ ಒಂದು ಸುಸಜ್ಜಿತ ಭಾಲಭವನ ಇಲ್ಲ, ನಮ್ಮ ಇಲಾಖೆಗೆ ಸುಸಜ್ಜಿತ ಕಟ್ಟಡ ಕೂಡ ಇಲ್ಲ. ಈ ಹಿನ್ನೆಲೆಯಲ್ಲಿ ಬಾಲಭವನಕ್ಕೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ನಗರದ ಮಧ್ಯದಲ್ಲಿಯೇ 4 ಎಕರೆ ಈ ವಿಶಾಲ ಜಾಗವನ್ನು ಗುರುತಿಸಿ ಬಾಲಭವನ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈ ಜಾಗದ ಮಾರುಕಟ್ಟೆ ಮೌಲ್ಯ100 ಕೋಟಿಗೂ ಅಧಿಕ. ಇದರ ಜೊತೆಗೆ, ನಮ್ಮ ಇಲಾಖೆಯ ಕಟ್ಟಡ ನಿರ್ಮಾಣಕ್ಕೆ ಸಹ ನಿರ್ಧರಿಸಲಾಗಿದೆ, ಇದಕ್ಕೆ 6 ಕೋಟಿ ರೂ. ಮಂಜೂರಾಗಿದ್ದು, ಇಷ್ಟರಲ್ಲೇ ಹಣ ಬಿಡುಗಡೆಯಾಗಲಿದೆ. ಬಾಲಭವನಕ್ಕೆ ಈಗಾಗಲೆ 20 ಕೋಟಿ ರೂ. ಮಂಜೂರು ಮಾಡಲಾಗಿದೆ, ಈಗಾಗಲೇ 2 ಕೋಟಿ ರೂ. ಬಿಡುಗಡೆ ಕೂಡ ಆಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಮಕ್ಕಳಿಗಾಗಿ ರೈಲು, ಫ್ಯಾಂಟಸಿ ಪಾರ್ಕ್ ಸೇರಿದಂತೆ, ಆಟದೊಂದಿಗೆ ಕಲಿಯುವುದಕ್ಕೆ ಅವಕಾಶವಾಗುವಂತೆ ಸರ್ವವಿಧದ ಸೌಕರ್ಯಗಳನ್ನು ಬಾಲಭವನ ಒಳಗೊಳ್ಳಲಿದೆ. ಮಕ್ಕಳಿಗೆ ಕಲಿಯುವುದಕ್ಕೆ ಮತ್ತು ನಲಿಯುವುದಕ್ಕೆ ಇದೊಂದು ಅತ್ಯುತ್ತಮ ಸ್ಥಳವಾಗಬೇಕೆನ್ನುವುದೇ ನನ್ನ ಉದ್ದೇಶ ಎಂದರು.

* *ಗೃಹಲಕ್ಷ್ಮೀ ಯೋಜನೆಗೆ ಪ್ರಚಾರ ಅವಶ್ಯ*


ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ,
ನಮ್ಮ‌ ಸರ್ಕಾರ ಕೊಟ್ಟ ಮಾತಿನಂತೆ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ಯೋಜನೆ ಯಶಸ್ವಿಯಾಗಿರುವುದು ನಮಗೆಲ್ಲ ಹೆಮ್ಮೆ ತರುವ ಸಂಗತಿಯಾಗಿದೆ. ಆದರೆ, ಗೃಹಲಕ್ಷ್ಮೀ ಯೋಜನೆಗೆ ಪ್ರಚಾರದ ಅವಶ್ಯಕತೆ ಇದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ‌
ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳಲ್ಲೂ ನಮ್ಮ ಯೋಜನೆಗಳನ್ನು ಕಾಪಿ ಮಾಡಲಾಗುತ್ತಿದೆ.‌ ಇದು ಗೃಹಲಕ್ಷ್ಮೀ ಯೋಜನೆಯ ಜನಪ್ರಿಯತೆಗೆ ಸಾಕ್ಷಿ. ನಾಳೆ ಗೃಹಲಕ್ಷ್ಮೀ ಯೋಜನೆಯನ್ನು ಜನೋಪಯೋಗಿಯಾಗಿ ಮತ್ತು ಸ್ವಾವಲಂಬನೆಗಾಗಿ ಮಹಿಳೆಯರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ. ಅವರಿಗೆಲ್ಲ ಆಡಳಿತ ಸೌಧವನ್ನು, ಆಡಳಿತ ವ್ಯವಸ್ಥೆಯನ್ನು ಹತ್ತಿರದಿಂದ ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಸಚಿವರು ಹೇಳಿದರು. ‌
*ಕಾನೂನಿಗಿಂತ ದೊಡ್ಡವರು ಯಾರು ಇಲ್ಲ*
ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡೋಣ. ಪ್ರಚೋದನಾತ್ಮಕ ಹೋರಾಟ ಮಾಡುವುದು ಬೇಡ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ರಾಜು ಸೇಠ್, ಬಾಲಭವನ ಅಧ್ಯಕ್ಷರಾದ ಜಿ.ಆರ್.ನಾಯ್ಡು, ಜಿ. ಪಂ. ಸಿಇಒ ರಾಹುಲ್ ಶಿಂಧೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಎನ್.ಸಿದ್ದೇಶ್ವರ, ಕಾರ್ಪೊರೇಟರ್ ಸಂದೀಪ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.