ಬೆಳಗಾವಿ: ಬೆಳಗಾವಿ ನಗರದಲ್ಲಿರುವ ರಾಜ್ಯ ಕಾರ್ಮಿಕ ವಿಮಾ ನಿಗಮದ 50 ಹಾಸಿಗೆಗಳ ಆಸ್ಪತ್ರೆಯ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಕೇಂದ್ರ ಕಾರ್ಮಿಕ ವಿಮಾ ನಿಗಮದ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸುಮಾರು 152.2 ಕೋಟಿ ರೂ.ಗಳ ಅನುದಾನದಡಿ ಟೆಂಡರ ಪ್ರಕ್ರಿಯೆ ಮುಗಿದು ಹಲವು ತಿಂಗಳು ಕಳೆದರು ಇದುವೆರೆಗೆ ಕಾಮಗಾರಿ ಪ್ರಾರಂಭಗೊಂಡಿರುವುದಿಲ್ಲ ಆದಷ್ಟು ಬೇಗನೇ ಆಸ್ಪತ್ರೆಯ ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸುವಂತೆ ರಾಜ್ಯ ಕಾರ್ಮಿಕ ವಿಮಾ ನಿಗಮದ ಪ್ರಾದೇಶಿಕ ನಿರ್ದೇಶಕರಿಗೆ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರಿಂದಿಲ್ಲಿ ಸೂಚಿಸಿದರು..

ನಗರದ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ರಾಜ್ಯ ಕಾರ್ಮಿಕ ವಿಮಾ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಾ.ರಾ.ವಿ. ಆಸ್ಪತ್ರೆ ಸ್ಥಳಾಂತರ ಮಾಡುವ ಕುರಿತು ಸೆಪ್ಟೆಂಬರ 2020 ರಿಂದ ಆಸಕ್ತಿ ವಹಿಸಿ, ಸಂಬಂಧಪಟ್ಟ ಮಂತ್ರಿಗಳನ್ನು ಅಧಿಕಾರಿಗಳನ್ನು ಭೇಟಿಯಾಗಿ ನೂತನ ಆಸ್ಪತ್ರೆ ನಿರ್ಮಿಸುವ ಕುರಿತು ಕೈಗೊಂಡ ಪ್ರಯತ್ನಗಳನ್ನು ಸಾಕಾರಗೊಳಿಸಲು ಆದಷ್ಟು ಬೇಗನೆ ಆಸ್ಪತ್ರೆಯ ಹಳೆಯ ಕಟ್ಟಡವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲು ತಿಳಿಸಿದರು.

ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗಳನ್ನು ಬೆಳಗಾವಿಯಲ್ಲಿರುವ ಕಾರಾವಿ ಚಿಕಿತ್ಸಾಲಯಗಳಿಗೆ ಹಾಗೂ ಹತ್ತಿರದ ಹುಬ್ಬಳ್ಳಿ ಮತ್ತು ದಾಂಡೇಲಿಯ ಆಸ್ಪತ್ರೆಗಳಿಗೆ ತಾತ್ಕಾಲಿಕ ನಿಯೋಜನೆ ಮಾಡಿ, ಕಟ್ಟಡವನ್ನು ತೆರವುಗೊಳಿಸಿಕೊಟ್ಟಲ್ಲಿ, ಕಟ್ಟಡ ಕೆಡವುವ ಕಾಮಗಾರಿ ಹಾಗೂ ನಿರ್ಮಾಣ ಕಾಮಗಾರಿಯನ್ನು ಬೇಗನೇ ಮಾಡಬಹುದೆಂದು ಅಧಿಕಾರಿಗಳಿಗೆ ತಿಳಿಸಿ, ಈ ವಿಷಯವನ್ನು ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯವರೊಂದಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಶೀಘ್ರವಾಗಿ ಕ್ರಮವಹಿಸಲು ಸೂಚಿಸಿದರು.

ವಿಒಟಿಸಿ ಹೊನಗಾ ಆಸ್ಪತ್ರೆ ಕಟ್ಟಡ ಮಾಲೀಕರು ಕಟ್ಟಡವನ್ನು ಇ.ಎಸ್.ಆಯ್ ಆಸ್ಪತ್ರೆಗೆ ಕೊಡಲು ಒಪ್ಪಿರುವ ಕಾರಣ, ಆ ಆಸ್ಪತ್ರೆಯನ್ನು ಸ್ಥಳಾಂತರಕ್ಕಾಗಿ ಪರಿಗಣಿಸುವಂತೆ ಸೂಚಿಸಿದರು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಉಪ ಪ್ರಾದೇಶಿಕ ಕಚೇರಿಯನ್ನು ಬೆಳಗಾವಿ ಕೇಂದ್ರಸ್ಥಾನವನ್ನಾಗಿ, ವಿಜಯಪುರ, ಬಾಗಲಕೋಟೆ ಮತ್ತು ಉತ್ತರಕನ್ನಡ ಜಿಲ್ಲೆಗಳನ್ನು ಅದರ ವ್ಯಾಪ್ತಿಗೆ ತರಲು ಕ್ರಮ ವಹಿಸಬೇಕೆಂದು ಪ್ರಾದೇಶಿಕ ನಿರ್ದೇಶಕರಿಗೆ ಸೂಚಿಸಿದರು.

ಸಭೆಯಲ್ಲಿ ರಾಜ್ಯ ಕಾರ್ಮಿಕ ವಿಮಾ ನಿಗಮದ ಪ್ರಾದೇಶಿಕ ನಿರ್ದೇಶಕ ಡಾ. ವಿ. ವರದರಾಜು, ಪ್ರಾಂತೀಯ ನಿರ್ದೇಶಕರು ಹಾಗೂ ಹೆಚ್ಚುವರಿ ಆಯುಕ್ತರಾದ ರೇಣುಕಾ ಪ್ರಸಾದ ಟಿ, ಕಾರ್ಯನಿರ್ವಾಹಕ ಅಭಿಯಂತರ ವಿನೋದ ಖರ್ಕವಾಲ, ಉಪಪ್ರಾಂತಿಯ ಕಛೇರಿ ಉಪನಿರ್ದೇಶಕ ರಘುರಾಮನ, ಕೆ, ಕಾ.ರಾ.ವಿ. ಆಸ್ಪತ್ರೆ ಬೆಳಗಾವಿ ವೈದ್ಯಕೀಯ ಅಧೀಕ್ಷಕರಾದ ಮಂಜುನಾಥ ಕಳಸನ್ನವರ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.