ಬೆಳಗಾವಿ: ಬೆಳಗಾವಿ ನಗರದಲ್ಲಿ ಇತ್ತೀಚೆಗೆ ಡಾ. ಪ್ರದೀಪ ಗೌಡರ ಎಂಬ ವೈದ್ಯರ ಮೇಲೆ ಕಾಂಗ್ರೆಸ್ ಮುಖಂಡ ಆರೀಫ್ ದೇಸಾಯಿ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದನ್ನು ಖಂಡಿಸಿ ಹಾಗೂ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದಿಂದ ನಗರ ಪೊಲೀಸ್ ಆಯುಕ್ತರ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು.

ಮನೆಯ ಮುಂದೆ ಕಾರ ನಿಲುಗಡೆಗೆ ವೇಳೆ ಕಾಂಗ್ರೆಸ್ ಮುಖಂಡ ಆರೀಫ್, ಡಾ. ಪ್ರದೀಪ ಅವರ ಮನೆಯ ಕುಟುಂಬಸ್ಥರ ಮುಂದೆಯೇ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಗುಂಡಾ ವರ್ತನೆ ಪ್ರದರ್ಶಿಸಿದ್ದರು. ಇದರ ಕುರಿತು ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ಹೋದರೂ ಕೂಡ ಸರಿಯಾಗಿ ಸ್ಪಂದಿಸಲಿಲ್ಲ. ವೈದ್ಯರ ಮೇಲೆ ಈ ರೀತಿ ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಪದೇ ಪದೇ ಇಂಥ ಘಟನೆಗಳು ಮರುಕಳಿಸುತ್ತವೆ. ಆದ್ದರಿಂದ ಹಲ್ಲೆ ಮಾಡಿದ ಆರೀಫ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಮಾಜದ ಜನರ ಆರೋಗ್ಯ ಕಾಪಾಡುವ ವೈದ್ಯರ ಮೇಲೆ ಈ ರೀತಿ ಹಲ್ಲೆ ಖಂಡನೀಯ. ಘಟನೆಯಿಂದ ಎಲ್ಲ ವೈದ್ಯರು ಭೀತಿಗೊಂಡಿದ್ದಾರೆ. ಬೆಳಗಾವಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ವೈದ್ಯರು, ವೈದ್ಯ ವಿದ್ಯಾರ್ಥಿಗಳಿದ್ದಾರೆ. ಹಾಗಾಗಿ, ಆರೋಪಿ ಆರೀಫ್ ವಿರುದ್ಧ ಕಠಿಣ ಕ್ರಮ ಕೈಗೊಂಡು ವೈದ್ಯರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಡಿಸಿಪಿ ಪಿ.ವ್ಹಿ.ಸ್ನೇಹಾ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾಧ್ಯಕ್ಷ ಡಾ. ಆರ್.ಬಿ.ಅನಗೋಳ ಮಾತನಾಡಿ, ಡಾ. ಪ್ರದೀಪ್ ಗೌಡರ ಮೇಲೆ ಹಲ್ಲೆ ಮಾಡಿರುವ ಆರೋಪಿ ಆರೀಫ್ ದೇಸಾಯಿಯನ್ನು ತಕ್ಷಣವೇ ಬಂಧಿಸಬೇಕು. ಘಟನೆಯಿಂದ ಎಲ್ಲ ವೈದ್ಯರು ಆತಂಕಿತರಾಗಿದ್ದಾರೆ ಎಂದು ಆರೋಪಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಡಿಸಿಪಿ ಪಿ.ವ್ಹಿ.ಸ್ನೇಹಾ ಅವರು, ಆದಷ್ಟು ಶೀಘ್ರ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಅವರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಕುರಿತು ತನಿಖೆ ಮಾಡುತ್ತೇವೆ.

ಪ್ರತಿಭಟನೆಯಲ್ಲಿ ಡಾ. ರವಿ ಪಾಟೀಲ, ಡಾ. ಸುಶಾರ್ತ ಕಾಮೋಜಿ, ಡಾ. ಸೋಮಶೇಖರ ಗುರನ್ನವರ, ಡಾ. ಮೀನಾ ಪಾಟೀಲ, ಡಾ. ರೂಪಾಲಿ, ಡಾ. ಬಸವರಾಜ ಬಿಜ್ಜರಗಿ  ಸೇರಿದಂತೆ ನೂರಾರು ವೈದ್ಯರು ಭಾಗವಹಿಸಿದ್ದರು.