ದಾವಣಗೆರೆ: ಸಮಾಜದಲ್ಲಿ ಎಲ್ಲರೂ ಒಂದೇ, ಎನ್ನುತ್ತ ಅನುಭವ ಮಂಟಪ ಕಟ್ಟಿದ ಬಸವಣ್ಣನವರು ಮೀಸಲಾತಿ ತರಲಿಲ್ಲ, ಸಮಾನತೆ ತಂದರು.  ಹೋರಾಟ ಮಾಡಿ ಮೀಸಲಾತಿ ತರುವುದಲ್ಲ. ಸರಕಾರದ ಮೀಸಲಾತಿ ಪಡೆಯಲು ಪಂಗಡಗಳು ಬೇರೆಯಾಗುತ್ತಿವೆ. ಯಾರೇ ಆದರೂ ಕೂಡ ಲಿಂಗಧಾರಣೆ ಮಾಡಿದರೆ ಅವರು ಲಿಂಗಾಯತರು ಎಂದು ಸಿರಿಗೆರೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಏರ್ಪಡಿಸಿರುವ 24 ಅಧಿವೇಶನದಲ್ಲಿ ಆಶಿರ್ವಚನ ನೀಡಿದ ಶ್ರೀಗಳು, 12 ಶತಮಾನದಲ್ಲಿಯೇ ಬಸವಣ್ಣನವರು ಎಲ್ಲ ಸಮುದಾಯದವರು ಸಮಾನರು ಎಂಬುದನ್ನು ಸಾರಿದ್ದಾರೆ. ವೀರಶೈವ ಸಮಾಜ ಅಧಃಪತನಕ್ಕೆ ಹೋಗ್ತಿರುವುದಕ್ಕೆ ವೀರಶೈವರೇ ಕಾರಣ. ವೀರಶೈವರಿಗೆ ಶತ್ರುಗಳು ಯಾರೆಂದರೆ ವೀರಶೈವರುಗಳೇ, ಲಿಂಗಾಯತರಿಗೆ ಲಿಂಗಾಯತರೇ ಶತ್ರುಗಳು. ಸರಕಾರಿ ಸೌಲಭ್ಯಗಳನ್ನು ಪಡೆಯುವದಕ್ಕೋಸ್ಕರ ಪಂಗಡಗಳಾಗಿ ಹರಿದು ಹಂಚಿಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಎಲ್ಲರೂ ತಮ್ಮ ಸ್ವಾರ್ಥ ಬದಿಗಿಟ್ಟು, ನಾವೆಲ್ಲರೂ ಒಂದೇ ಎಂಬ ಭಾವನೆ ಇಟ್ಟುಕೊಂಡು ಸಂಘಟಿಸಿದರೆ ಮಾತ್ರ ಲಿಂಗಾಯತ ಸಮಾಜ ಸಂಘಟನೆ ಆಗಲಿದೆ. ಈ ಮೀಸಲಾತಿಯೇ ವೀರಶೈವರ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ. ನಮ್ಮದು ಮಿತ ಸಂಖ್ಯೆ ಆಗಲು ಸಾಧ್ಯವಿಲ್ಲ. ಸರ್ಕಾರಿ ಸೌಲಭ್ಯ ಪಡೆಯಲು ಸಮುದಾಯದಲ್ಲಿ ಉಪ ಪಂಗಡಗಳನ್ನು ಹೇಳುತ್ತ ಹೋಗುತ್ತಿರುವುದೇ ವೀರಶೈವ ಸಮಾಜದ ಸಂಖ್ಯೆ ಕಡಿಮೆ ಆಗಲು ಪ್ರಮುಖ ಕಾರಣ. ಬಸವಣ್ಣನವರ ನುಡಿಗಳನ್ನು ಈ ಅಧಿವೇಶನದಲ್ಲಿ ಹೇಳುವುದಷ್ಟೇ ಹೊರತು, ಅದು ಕಾರ್ಯರೂಪಕ್ಕೆ ಬರುತ್ತಿಲ್ಲ ನುಡಿದರು.

ಇದೇ ವೇಳೆ ಮಾತನಾಡಿದ ಶ್ರೀಶೈಲ ಪೀಠದ ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು, ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬುದಕ್ಕೆ ಪರೋಕ್ಷವಾಗಿ ಬೆಂಬಲ ಕೊಟ್ಟು ಕೈ ಸುಟ್ಟಿಕೊಂಡಿದ್ದಾಗಿದೆ. ಸರ್ಕಾರ ಈ ಸಮಾಜವನ್ನು ಕಡೆಗಣಿಸಬಾರದು. ಅಷ್ಟೇ ಅಲ್ಲ, ಈ ಸಮುದಾಯದ ಒಗ್ಗಟ್ಟಿನ ಜೊತೆ ಸರ್ಕಾರ ಚೆಲ್ಲಾಟ ಆಡಬಾರದು ಎಂದು ಎಚ್ಚರಿಕೆ ನೀಡಿದರು.

ರಾಜಕೀಯ ಹಿತಾಸಕ್ತಿಯಿಂದ ವೀರಶೈವ ಲಿಂಗಾಯತ ಸಮಾಜವನ್ನು ಇಬ್ಬಾಗ ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ನಡೆದಾಗ ಶಾಮನೂರು ಶಿವಶಂಕರಪ್ಪ ಅವರು ಕಲ್ಲು ಬಂಡೆಯಾಗಿ ನಿಂತಿದ್ದರು. ಒಂದು ವರದಿಯ ಮೂಲಕ ವಿಶಾಲವಾದ ನಮ್ಮ ಸಮಾಜವನ್ನು ಸಂಕುಚಿತಗೊಳಿಸಿ, ತಾವು ಮೇಲೇರಬೇಕೆಂಬ ಹುನ್ನಾರ ನಡೆದಾಗ ಅದನ್ನು ತಿರಸ್ಕಾರ ಮಾಡಬೇಕೆಂದು ಮಹಾಸಭಾವು ಮಾಡಿದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ.

ಕೇಂದ್ರದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳನ್ನು ಸೇರಿಸುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಅದನ್ನು ಪರಿಗಣಿಸಬೇಕು. ಆಗ ಮಾತ್ರ ಈ ಸಮಾಜಕ್ಕೆ ಆಗಿರುವಂತಹ ಸರ್ಕಾರದ ಮೀಸಲಾತಿಯ ಅನ್ಯಾಯವು ದೂರವಾಗುತ್ತದೆ. ಕಾಯಕ ವೃತ್ತಿಯಿಂದ ಪಂಗಡಗಳಾಗಿವೆ ಆದರೆ ನಾವೆಲ್ಲರೂ ಒಂದು ಎಂಬುದನ್ನು ಮರೆಯದೇ ಸಂಘಟಿತರಾಗಬೇಕೆಂದು ಕರೆ ನೀಡಿದರು.