ಬಾಗಲಕೋಟೆ : ಬಾಳೆಹೊನ್ನೂರು ಮಠದ ಜಗದ್ಗುರು ರಂಭಾಪುರಿ ಶ್ರೀಗಳು ಅಡ್ಡ ಪಲ್ಲಕ್ಕಿಗೆ ಹೋಗುತ್ತಿರುವ ಸಂದರ್ಭದಲ್ಲಿ ಕಾರಿನ ಮೇಲೆ ಚಪ್ಪಲಿ ಎಸೆದಿರುವ ಘಟನೆ ಬಾಗಲಕೋಟೆ ಜಿಲ್ಲೆ ಕಲಾದಗಿ ಗ್ರಾಮದಲ್ಲಿ ನಡೆದಿದೆ.
ಕಲಾದಗಿಯ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ವಿವಾದಕ್ಕೆ ಸಂಬಂಧಿಸಿದಂತೆ ಹಾಗೂ ಗಂಗಾಧರ ಸ್ವಾಮೀಜಿಯಿಂದ ಮಠದ ಉಳುಮೆಗೆ ವಿರೋಧಿಸಿ ಅಲ್ಲಿನ ಭಕ್ತರು ಪ್ರತಿಭಟನೆ ನಡೆಸುತ್ತಿದ್ದರು, ಅದೇ ಸಂದರ್ಭದಲ್ಲಿ ಬಂದ ಸ್ವಾಮಿಜಿ ಕಾರಿನ ಮೇಲೆ ಮಹಿಳೆಯೊರ್ವರು ಚಪ್ಪಲಿ ಎಸೆದಿದ್ದಾರೆ. ಕೂಡಲೇ ಪೊಲೀಸರು ಮಧ್ಯ ಪ್ರವೇಶ ಮಾಡಿ ಮಹಿಳೆಯರನ್ನು ಚದುರಿಸಿದರು.
ಕಾರ್ಯಕ್ರಮವೊಂದರ ನಿಮಿತ್ತ ಬಾಗಲಕೋಟೆಗೆ ಆಗಮಿಸಿದ್ದ ರಂಭಾಪುರಿ ಶ್ರೀಗಳು ಕಲಾದಗಿಯಲ್ಲಿರುವ ಮಠಕ್ಕೆ ಹೊರಟಿದ್ದರು. ಮಠದ ವಿಚಾರಕ್ಕೆ ಸಂಬಂಧಿಸಿ ವಿವಾದ ಇರುವುದರಿಂದ ಅಲ್ಲಿಗೆ ಹೋಗಬಾರದು ಎಂದು ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರೂ ಕೂಡ ಶ್ರೀಗಳು ಅಲ್ಲಿಗೆ ತೆರಳಿದಾಗ ಭಕ್ತರು ಪ್ರತಿಭಟಿಸಿದ್ದಾರೆ.
ಕಲಾದಗಿ ಗ್ರಾಮದ ರಂಭಾಪುರಿ ಜಗದ್ಗುರು ಪೀಠದ ಶಾಖಾ ಮಠವಾದ ಗುರುಲಿಂಗೇಶ್ವರ ಮಠದ ಪೀಠಾಧಿಪತಿಗಳು 2019ರಲ್ಲಿ ಲಿಂಗೈಕ್ಯರಾಗಿದ್ದರು. ಮುಂದೆ ಪೀಠಾಧಿಪತಿಗಳು ಯಾರಾಗಬೇಕು ಎಂಬ ವಿಚಾರದಲ್ಲಿ ವಿವಾದ ಹುಟ್ಟಿಕೊಂಡಿತ್ತು. ಇಬ್ಬರು ಶ್ರೀಗಳ ನಡುವೆ ವಿವಾದದಿಂದ ಗುರುಗಳ ಆಯ್ಕೆ ಆಗಿರಲಿಲ್ಲ. ವಿವಾದವು ಕೋರ್ಟ್ನಲ್ಲಿದೆ.
ವಿವಾದ ಕೋರ್ಟ್ನಲ್ಲಿರುವುದರಿಂದ ರಂಭಾಪುರಿ ಶ್ರೀಗಳು ಕಲಾದಗಿ ಮಠಕ್ಕೆ ಭೇಟಿ ನೀಡುವುದು ಸರಿಯಲ್ಲ ಎನ್ನುವುದು ವಾದವಾಗಿದೆ. ಶ್ರೀಗಳು ಮಠಕ್ಕೆ ಭೇಟಿ ನೀಡುವುದಲ್ಲದೆ, ವಿವಾದ ಕೋರ್ಟ್ ನಲ್ಲಿರುವಾಗ ಕಟ್ಟಡ ದುರಸ್ತಿ ಹಾಗೂ ಜಮೀನು ಉಳುಮೆಗೆ ತಕರಾರು ಎದುರಾಗಿತ್ತು.
ಶ್ರೀಗಳು ಕಲಾದಗಿಗೆ ಬರುತ್ತಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಅವರನ್ನು ತಡೆಯಲು ಜನರು ಜಮಾಯಿಸಿದ್ದರು. ಆದರೆ, ಜನರೊಂದಿಗೆ ಮಾತನಾಡಿ ಸಮಾಧಾನಪಡಿಸಬಹುದೆಂಬ ಉದ್ದೇಶದಿಂದ ಶ್ರೀಗಳು ಅಲ್ಲಿಗೆ ತೆರಳಿದ್ದರು. ಶ್ರೀಗಳು ಗ್ರಾಮಕ್ಕೆ ಬರುತ್ತಿದ್ದಂತೆ ಅವರ ಕಾರನ್ನು ತಡೆಯಲು ಪ್ರಯತ್ನಿಸಿದಾಗ ನಿಲ್ಲಿಸದೆ ಮುಂದೆ ಹೋದಾಗ ಮಹಿಳೆಯೊಬ್ಬರು ಕಾರಿನ ಮೇಲೆ ಚಪ್ಪಲಿ ಎಸೆದರು. ಕೂಡಲೇ ಅಲ್ಲಿದ್ದ ಭಕ್ತರು ಮಹಿಳೆಯನ್ನು ತಡೆದು ಪೊಲೀಸರ ವಶಕ್ಕೆ ಒಪ್ಪಿಸಿದರು.